ಇತ್ತಂಡಗಳ ಸಂಕ್ಷಿಪ್ತ ಸ್ಕೋರ್
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬೆಂಗಾಲ್ ತಂಡ, ಮೊದಲ ಇನ್ನಿಂಗ್ಸ್ನಲ್ಲಿ 312-10 (92) ಸ್ಕೋರ್, ದ್ವಿತೀಯ ಇನ್ನಿಂಗ್ಸ್ನಲ್ಲಿ 161-10 (54.4) ಸ್ಕೋರ್ ಮಾಡಿತ್ತು. ಗುರಿ ಬೆನ್ನತ್ತಿದ ಕರ್ನಾಟಕ, ಮೊದಲ ಇನ್ನಿಂಗ್ಸ್ನಲ್ಲಿ 122-10 (36.2), ದ್ವಿತೀಯ ಇನ್ನಿಂಗ್ಸ್ನಲ್ಲಿ 177-10 (55.3) ರನ್ ಗಳಿಸಿ ಶರಣಾಗಿದೆ.
ಬೆಂಗಾಲ್ ಗೆಲುವಿಗೆ ಪ್ರಮುಖ ಕಾರಣ
ಬೆಂಗಾಲ್ ಗೆಲುವಿಗೆ ಮುಖ್ಯ ಕಾರಣವೆಂದರೆ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು. ಅನುಸ್ತೂಪ್ ಮಜುಂದಾರ್ ಅಜೇಯ 149 ರನ್ ಗಳಿಸಿದ್ದರೆ, ಆಕಾಶ್ ದೀಪ್ 44 ರನ್ ಕೊಡುಗೆಯಿತ್ತರು. ಅಷ್ಟೇ ಅಲ್ಲ ಕರ್ನಾಟಕದ ಮೊದಲ ಇನ್ನಿಂಗ್ಸ್ನಲ್ಲಿ ಇಶಾನ್ ಪೊರೆಲ್ 39 ರನ್ಗೆ 5, ಆಕಾಶ್ ದೀಪ್ 30 ರನ್ಗೆ 3 ವಿಕೆಟ್ ಮುರಿದು ಕಾಡಿದರು.
ಕರ್ನಾಟಕ ನೀರಸ ಬ್ಯಾಟಿಂಗ್
ಕರ್ನಾಟಕ ತಂಡ ಪ್ರಮುಖ ಪಂದ್ಯದಲ್ಲೇ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದೂ ಸೋಲಿಗೆ ಕಾರಣವೆ. ಕೆಎಲ್ ರಾಹುಲ್ 26+0, ನಾಯಕ ಕರುಣ್ ನಾಯರ್ 3+6, ಮನೀಶ್ ಪಂಡೆ 12+12 ರನ್ ಗಳಿಸಿದ್ದು ತಂಡದ ದುರ್ಬಲ ಬ್ಯಾಟಿಂಗ್ಗೆ ಸಾಕ್ಷಿ ಹೇಳಿತು. ಅದರಲ್ಲೂ ದ್ವಿತೀಯ ಇನ್ನಿಂಗ್ಸ್ನಲ್ಲಿ ಎದುರಾಳಿ ಬೆಂಗಾಲ್ನ ಬೌಲರ್ ಮುಕೇಶ್ ಕುಮಾರ್ 61 ರನ್ಗೆ 6 ವಿಕೆಟ್ ಮುರಿದು ಸೋಲಿಗೆ ಕಾರಣರಾದರು.
13 ವರ್ಷಗಳ ಹಿಂದಿನ ದಾಖಲೆ
ಒಟ್ಟು ಎರಡು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿರುವ ಬೆಂಗಾಲ್ ತಂಡ, ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಾದಾರ್ಪಣೆ ಮಾಡಿದ್ದ 1989-90ರ ಸೀಸನ್ನಲ್ಲೂ ಪ್ರಶಸ್ತಿ ಜಯಿಸಿತ್ತು. ಬೆಂಗಾಲ್ ತಂಡ ಕಡೇಯ ಸಾರಿ ಫೈನಲ್ಗೆ ಪ್ರವೇಶಿಸಿದ್ದು ಸುಮಾರು 13 ವರ್ಷಗಳಿಗೆ ಹಿಂದೆ. ಅಂದರೆ 2006-07ರಲ್ಲಿ ಫೈನಲ್ ಪ್ರವೇಶಿಸಿದ್ದ ಬೆಂಗಾಲ್, ಮುಂಬೈ ವಿರುದ್ಧದ ಸೋತಿತ್ತು.