ಹರಾರೆ, ಜುಲೈ 10: ಬಾಂಗ್ಲಾದೇಶದ ಸರಣಿ ಸೋಲಿನಿಂದ ಕಂಗೆಟ್ಟಿದ್ದ ತಂಡಕ್ಕೆ ಜಯದ ಟಾನಿಕ್ ಸಿಕ್ಕಿದೆ. ಕೊನೆಯವರೆಗೂ ಕುತೂಹಲ ಕಾಯ್ದುಕೊಂಡ ಪಂದ್ಯದಲ್ಲಿ ಭಾರತಕ್ಕೆ ದಕ್ಕಿದ್ದು 4 ರನ್ ಗಳ ಜಯ.
ಜಿಂಬಾಬ್ವೆ ನಾಯಕ ಎಲ್ಟಾನ್ ಚಿಂಗುಂಬುರಾ ಅವರ ಶತಕ ಜಿಂಬಾಬ್ವೆಗೆ ಗೆಲುವು ತಂದು ಕೊಡಲಿಲ್ಲ. ಕೊನೆ ಓವರ್ ಎಸೆದ ಭುವನೇಶ್ವರ್ ಭಾರತದ ಪಾಲಿಗೆ ಹೀರೋ ಆದರು. ಶತಕ ಸಾಧಕ ರಾಯಡು ಮತ್ತು ಅರ್ಧಶತಕ ದಾಖಲಿಸಿದ ಸ್ಟುವರ್ಟ್ ಬಿನ್ನಿ ಭಾರತಕ್ಕೆ ಜಯ ತಂದುಕೊಟ್ಟರು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಭಾರತ ಉತ್ತಮ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ನಾಯಕ ಅಜಿಂಕ್ಯ ರಹಾನೆ 34 ರನ್ ಗಳಿಸಿ ಔಟಾಗುವುದಕ್ಕೂ ಮುನ್ನ ಮಿರಳಿ ವಿಜಯ್ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.
ಮನೋಜ್ ತಿವಾರಿ 2, ರಾಬಿನ್ ಉತ್ತಪ್ಪ 0, ಕೇದಾರ್ ಜಾಧವ್ 5 ವೈಫಲ್ಯದ ನಡುವೆ ಸ್ಟುವರ್ಟ್ ಬಿನ್ನಿ 76 ಎಸೆತಗಳಲ್ಲಿ 77ರನ್ (6 ಬೌಂಡರಿ, 2 ಸಿಕ್ಸರ್),ಅಂಬಟಿ ರಾಯುಡು ಅಜೇಯ 125 ರನ್ (133 ಎಸೆತ, 12x4, 1x6) ಗಳಿಸಿ ಭಾರತದ ಮೊತ್ತ 255ಕ್ಕೆ ಏರಿಸಿದರು. ಜಿಂಬಾಬ್ವೆ ಪರ ತಿರಿಪಾನೋ ಹಾಗೂ ಚಿಭಾಭಾ ತಲಾ 2 ವಿಕೆಟ್ ಹಾಗೂ ವಿಟೋರಿ 1 ವಿಕೆಟ್ ಕಿತ್ತರು.


