ಬೆಂಗಳೂರು, ಆಗಸ್ಟ್ 23: 2011ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಪ್ರಮುಖ ಆಟಗಾರರೊಬ್ಬರಿಗೂ ಜನಪ್ರಿಯ ಬುಕ್ಕಿಗೂ ನಂಟಿತ್ತು ಎಂದು ತನಿಖಾಧಿಕಾರಿ ಬಿ.ಬಿ ಮಿಶ್ರಾ ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ. ಆದರೆ, ಆ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.
ಸುಪ್ರೀಂಕೋರ್ಟಿನಿಂದ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ಬಿ. ಬಿ ಶರ್ಮಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2013ರ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡುತ್ತಾ, ಬುಕ್ಕಿಯೊಬ್ಬ ತನ್ನೊಂದಿಗೆ ಸಂಪರ್ಕದಲ್ಲಿದ್ದ ಆಟಗಾರ ಹಾಗೂ ಇಬ್ಬರ ನಡುವಿನ ಸಂಭಾಷಣೆ ಸಾಕ್ಷ್ಯವನ್ನು ನೀಡುವುದಾಗಿ ಮುಂದೆ ಬಂದಿದ್ದ. ಆದರೆ, ಕೊನೆ ಕ್ಷಣದಲ್ಲಿ ಸಾಕ್ಷ್ಯ ಕೈ ಸೇರಲಿಲ್ಲ. ಕೇಸು ನೆನಗುದಿಗೆ ಬಿತ್ತು ಎಂದಿದ್ದಾರೆ.
2008-09ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ಸಂಭಾಷಣೆ ಹಾಗೂ ಆಟಗಾರನ ಬಗ್ಗೆ ಬುಕ್ಕಿಯಿಂದ ಮಾಹಿತಿ ಸಿಕ್ಕಿತ್ತು. ಆದರೆ, ನನ್ನ ತನಿಖೆ ವ್ಯಾಪ್ತಿಗೆ ಮೀರಿದ ವಿಷಯ ಇದಾಗಿತ್ತು. ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, ಗುರುನಾಥ್ ಮೇಯಪ್ಪನ್, ರಾಜ್ ಕುಂದ್ರಾ, ಸುಂದರ್ ರಾಮನ್ ಅವರ ಮೇಲಿನ ಆರೋಪದ ಬಗ್ಗೆ ತನಿಖೆ, 9 ಆಟಗಾರರ ವಿಚಾರಣೆ ಆ ಸಮಯಕ್ಕೆ ಮುಖ್ಯವಾಗಿತ್ತು ಎಂದು ಮಿಶ್ರಾ ಹೇಳಿದ್ದಾರೆ.
ಬಿಹಾರದ ಬಹುಕೋಟಿ ಮೇವು ಹಗರಣ, ಪಶ್ಚಿಮ ಬಂಗಾಲದ ನಂದಿಗ್ರಾಮ ಪ್ರಕರಣಗಳ ತನಿಖೆ ನಡೆಸಿರುವ ಮಿಶ್ರಾ ಅವರು ಐಪಿಎಲ್ ಹಗರಣದ ತನಿಖಾಧಿಕಾರಿಯಾಗಿ ಸುಪ್ರೀಂಕೋರ್ಟಿನಿಂದ ನೇಮಿಸಲಾಗಿದೆ.