ಹರಾರೆ, ಜೂನ್ 13: ಅತಿಥೇಯ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿದೆ. ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲು ಭಾರತ ತಂಡಕ್ಕೆ ಜಿಂಬಾಬ್ವೆ ತಂಡ 127ರನ್ ಗಳ ಟಾರ್ಗೆಟ್ ನೀಡಿದೆ.
ಭಾರತದ ಚೇಸಿಂಗ್ : ಕಳೆದ ಪಂದ್ಯದ ಶತಕ ವೀರ ಕೆಎಲ್ ರಾಹುಲ್ ಅವರು 33 ರನ್ ಹಾಗೂ ಕರುಣ್ ನಾಯರ್ 39ರನ್ ಗಳಿಸಿ ಹಾಕಿಕೊಟ್ಟ ಅಡಿಪಾಯದ ಮೇಲೆ ಅಂಬಟಿ ರಾಯುಡು ಅಜೇಯ 41ರನ್ ಗಳಿಸಿ ಅಲ್ಪಮೊತ್ತದ ರನ್ ಚೇಸ್ ಸುಲಭವಾಗಿ ಸಾಧಿಸಿದರು.
ಜಿಂಬಾಬ್ವೆ ತಂಡದ ವಿರುದ್ಧ 26.5ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 129ರನ್ ಗಳಿಸಿ 8 ವಿಕೆಟ್ ಗಳ ಜಯ ದಾಖಲಿಸಿದರು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಭಾರತ ಗೆದ್ದುಕೊಂಡಿದೆ.

ಭಾರತದ ಪರ ಸ್ರಾನ್ ಹಾಗೂ ಧವಳ್ ಕುಲಕರ್ಣಿ ತಲಾ 2 ವಿಕೆಟ್, ಬೂಮ್ರಾ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರೆ, ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ 3 ವಿಕೆಟ್ ಕಬಳಿಸಿ ಉತ್ತಮ ಪ್ರದರ್ಶನ ನೀಡಿದರು.[ಜಿಂಬಾಬ್ವೆಯಲ್ಲಿ ದಾಖಲೆ ಬರೆದ ಕರ್ನಾಟಕದ ರಾಹುಲ್]
ಶನಿವಾರದಂದು ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಧೋನಿ ಅವರು ಉಳಿಸಿಕೊಂಡಿದ್ದಾರೆ. ಜಿಂಬಾಬ್ವೆ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. [ಕರುಣ್ ನಾಯರ್ ಸೇರಿ ಐವರಿಗೆ ಮೊದಲ ಅನುಭವ]
ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ದಾಖಲಿಸಿ ಜಿಂಬಾಬ್ವೆ ವಿರುದ್ಧ ಗೆಲುವಿಗೆ ಕಾರಣರಾಗಿದ್ದರು.