ಕೊಲಂಬೋ, ಆಗಸ್ಟ್ 23: ಆರಂಭಿಕ ಆಟಗಾರ ಮುರಳಿ ವಿಜಯ್ ಅವರ ಉತ್ತಮ ಅರ್ಧಶತಕದ ಅಡಿಪಾಯದ ಮೇಲೆ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ನಾಲ್ಕನೇ ದಿನದ ಅಂತ್ಯಕ್ಕೆ ಶ್ರೀಲಂಕಾ ತಂಡ 72/2 ಸ್ಕೋರ್ ಮಾಡಿದೆ.
ಭೋಜನ ವಿರಾಮದ ನಂತರ ಅಜಿಂಕ್ಯ ರಹಾನೆ ಶತಕ ದಾಖಲಿಸಿದರು. 325/8 ಸ್ಕೋರಿಗೆ ಭಾರತದ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 2ನೇ ಟೆಸ್ಟ್ ಪಂದ್ಯ ಗೆಲ್ಲಲು ಶ್ರೀಲಂಕಾಕ್ಕೆ 413 ರನ್ ಟಾರ್ಗೆಟ್ ನೀಡಲಾಗಿದೆ.
ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡ ಹಿನ್ನೆಲೆಯಲ್ಲಿ ಸಹಾ ಬದಲಿಗೆ ಕೆಎಲ್ ರಾಹುಲ್ ಅವರು ಮೊದಲ ಬಾರಿಗೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಕುಮಾರ್ ಸಂಗಕ್ಕಾರ ಅವರು ತಮ್ಮ ಕ್ರಿಕೆಟ್ ಬದುಕಿನ ಕಟ್ಟ ಕಡೆಯ ಇನ್ನಿಂಗ್ಸ್ ಆಡಿದರು..


ಇದಕ್ಕೂ ಮುನ್ನ ಮುರಳಿ ವಿಜಯ್ ಅವರು 133 ಎಸೆತಗಳಲ್ಲಿ 4 ಬೌಂಡರಿ ಇದ್ದ 82 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಕಳೆದ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಕರ್ನಾಟಕದ ಕೆಎಲ್ ರಾಹುಲ್ ಅವರು 2 ರನ್ ಗಳಿಸಿ ಔಟಾದರೆ, ನಾಯಕ ವಿರಾಟ್ ಕೊಹ್ಲಿ10 ರನ್ ಗಳಿಸಿ ಪೆವಿಲಿಯನ್ ಸೇರಿದರು. ರಹಾನೆ ಹಾಗೂ ರಾಹುಲ್ ಶರ್ಮ ತ್ವರಿತಗತಿಯಲ್ಲಿ ರನ್ ಗಳಿಸುವ ಉತ್ಸಾಹದಲ್ಲಿದ್ದಾರೆ.
ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 108 ಓವರ್ ಗಳಲ್ಲಿ 306 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಏಂಜೆಲೋ ಮ್ಯಾಥ್ಯೂಸ್ 102 ರನ್ ಗಳಿಸಿದರೂ ಭಾರತದ ಮೊದಲ ಇನ್ನಿಂಗ್ಸ್ ಮೊತ್ತ 393 ರನ್ ದಾಟಲಾಗಲಿಲ್ಲ. (ಒನ್ ಇಂಡಿಯಾ ಸುದ್ದಿ)