ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಈ ಮೂವರಿಗೆ ಪುನಃ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನ!

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್ ನೇತೃತ್ವದ ಯುವ ಆಟಗಾರರನ್ನೊಳಗೊಂಡ ಟೀಂ ಇಂಡಿಯಾ ಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಗೆದ್ದು 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಸೋತಿದೆ. ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದಾಗ ಇದು ಭಾರತದ ಬಿ ತಂಡ, ಇವರು ಲಂಕಾ ವಿರುದ್ಧ ಗೆಲ್ಲುವುದು ಅನುಮಾನ ಎಂದೆಲ್ಲ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆಲುವು ಸಾಧಿಸುವುದರ ಮೂಲಕ ಎಲ್ಲ ಟೀಕೆಗಳಿಗೆ ಮತ್ತು ಸಂಶಯಗಳಿಗೆ ಉತ್ತರ ನೀಡಿತು.
ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ 38 ರನ್ಗಳ ಜಯವನ್ನು ಸಾಧಿಸಿತು. ಆದರೆ ಉಳಿದ 2 ಟಿ ಟ್ವೆಂಟಿ ಪಂದ್ಯಗಳಲ್ಲಿ ಮಾತ್ರ ಟೀಮ್ ಇಂಡಿಯಾ ಹೀನಾಯವಾಗಿ ಸೋಲುವುದರ ಮೂಲಕ ಭಾರೀ ಟೀಕೆಗೆ ಒಳಗಾಗಿದೆ. ದ್ವಿತೀಯ ಟಿ ಟ್ವೆಂಟಿ ಪಂದ್ಯಕ್ಕೂ ಮುನ್ನ ಕೊರೋನಾವೈರಸ್ ಕಾರಣದಿಂದಾಗಿ ಭಾರತ ತಂಡದ ಹಲವಾರು ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಯಿತು. ಹೌದು ಭಾರತ ತಂಡದ ಕೃನಾಲ್ ಪಾಂಡ್ಯಗೆ ಕೊರೋನಾವೈರಸ್ ಪಾಸಿಟಿವ್ ಬಂದ ಕಾರಣ ಭಾರತದ ಪ್ರಮುಖ ಆಟಗಾರರು ಟೂರ್ನಿಯಿಂದ ಹೊರಗುಳಿದ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ.
ಹೀಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಯುವ ಆಟಗಾರರಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸುವರ್ಣಾವಕಾಶ ಲಭಿಸಿತು. ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಸಿಗುವುದೇ ಕಷ್ಟ ಅಂಥದ್ದರಲ್ಲಿ ಯಾರೂ ಊಹಿಸಿರದ ರೀತಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಯುವ ಆಟಗಾರರಿಗೆ ಆ ಸುವರ್ಣಾವಕಾಶ ಒದಗಿ ಬಂದಿತ್ತು. ಆದರೆ ದುರದೃಷ್ಟವಶಾತ್ ಇಂತಹ ಒಳ್ಳೆಯ ಅವಕಾಶವನ್ನು ಯಾವೊಬ್ಬ ಆಟಗಾರನೂ ಸಹ ಸರಿಯಾಗಿ ಬಳಸಿಕೊಳ್ಳಲಿಲ್ಲ. ಹೀಗೆ ಸಿಕ್ಕ ಅವಕಾಶವನ್ನು ಕೈಚೆಲ್ಲಿ ಕಳಪೆ ಪ್ರದರ್ಶನ ತೋರಿರುವ 3 ಯುವ ಆಟಗಾರರಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ದೂರದ ಮಾತು ಎಂದು ಕ್ರೀಡಾ ಪಂಡಿತರು ಹೇಳುತ್ತಿದ್ದಾರೆ. ವಿಪರ್ಯಾಸವೆಂದರೆ ಈ ಮೂವರು ಕ್ರಿಕೆಟಿಗರು ಶ್ರೀಲಂಕಾ ವಿರುದ್ಧದ ಈ ಸರಣಿಯಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಅದೇ ಸರಣಿಯಿಂದ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೊಡೆತ ಬೀಳುವಂತಹ ಪ್ರದರ್ಶನ ನೀಡುವುದರ ಮೂಲಕ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಹೀಗೆ ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮುಂದಿನ ದಿನಗಳಲ್ಲಿ ಅವಕಾಶ ವಂಚಿತರಾಗಬಲ್ಲ ಮೂವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

ನಿತೀಶ್ ರಾಣಾ
ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ ಟ್ವೆಂಟಿ ಪಂದ್ಯಗಳ ಪೈಕಿ ಇತರ ಯುವ ಆಟಗಾರರಿಗಿಂತ ನಿತೀಶ್ ರಾಣಾಗೆ ತುಸು ಹೆಚ್ಚೇ ಅವಕಾಶ ಸಿಕ್ಕಿತು ಎಂದು ಹೇಳಬಹುದು. ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ನಿತೀಶ್ ರಾಣಾ 14 ಎಸೆತಗಳಲ್ಲಿ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ ಲಂಕಾ ವಿರುದ್ಧದ ಎರಡನೇ ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಸಹ ನಿತೀಶ್ ರಾಣಾಗೆ ಅವಕಾಶ ಲಭಿಸಿತು. ಲಂಕಾ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ 12 ಎಸೆತಗಳಿಗೆ 9 ರನ್ ಬಾರಿಸಿ ಔಟ್ ಆಗಿದ್ದ ನಿತೀಶ್ ರಾಣಾ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ 15 ಎಸೆತಗಳಿಗೆ 6 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡು ನಿರಾಸೆ ಮೂಡಿಸಿದರು. ಹೀಗೆ ಸಿಕ್ಕ 3 ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ ನಿತೀಶ್ ರಾಣಾಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡುವ ಸಾಹಸಕ್ಕೆ ಆಯ್ಕೆಗಾರರು ಕೈ ಹಾಕಲಾರರು ಎನಿಸುತ್ತದೆ.

ಕೃಷ್ಣಪ್ಪ ಗೌತಮ್
ಕನ್ನಡಿಗ ಕೃಷ್ಣಪ್ಪ ಗೌತಮ್ ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ಭನುಕಾ ವಿಕೆಟ್ ಪಡೆದ ಕೃಷ್ಣಪ್ಪ ಗೌತಮ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. 8 ಓವರ್ ಬೌಲಿಂಗ್ ಮಾಡಿದ ಕೃಷ್ಣಪ್ಪ ಗೌತಮ್ 49 ರನ್ ನೀಡಿ ಕೇವಲ 1 ವಿಕೆಟ್ ಪಡೆಯಲು ಮಾತ್ರ ಶಕ್ತರಾದರು. ಅದೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನೂ ಪಡೆದ ಕೃಷ್ಣಪ್ಪ ಗೌತಮ್ 3 ಎಸೆತಗಳಿಗೆ 2 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಕೃಷ್ಣಪ್ಪ ಗೌತಮ್ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವೇ ಸರಿ. ಇನ್ನು ಕೃಷ್ಣಪ್ಪ ಗೌತಮ್ ವಯಸ್ಸು ಈಗಾಗಲೇ 32 ಆಗಿದ್ದು ಮತ್ತೆ ಅವಕಾಶ ಸಿಗುವುದು ತೀರಾ ಕಷ್ಟ

ಸಂದೀಪ್ ವಾರಿಯರ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಕೆಲ ಪಂದ್ಯಗಳಲ್ಲಿ ಆಡಿರುವ ಸಂದೀಪ್ ವಾರಿಯರ್ ಶ್ರೀಲಂಕಾ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಆದರೆ ಸಂದೀಪ್ ಅದೃಷ್ಟವೋ ಏನೋ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಅವರಿಗೆ ಲಭಿಸಿತು. ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಸಂದೀಪ್ ವಿಫಲರಾದರು. ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಅವಕಾಶ ಪಡೆದ ಸಂದೀಪ್ 3 ಓವರ್ ಮಾಡಿ 23 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications