18ನೇ ಆವೃತ್ತಿಯ ಐಪಿಎಲ್ ಹರಾಜಿನ ಲೆಕ್ಕಾಚಾರಗಳು ಆರಂಭವಾಗಿವೆ. ಇನ್ನು ಒಮ್ಮೆಯೂ ಟೂರ್ನಿಯ ಪ್ರಶಸ್ತಿ ಗೆಲ್ಲದ ಆರ್ಸಿಬಿ ಸ್ಟಾರ್ ಆಟಗಾರರ ಖರೀದಿಗೆ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಾಣುತ್ತಿದೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆರ್ಸಿಬಿ ಪ್ಲೇ ಆಫ್ಗೆ ಪ್ರವೇಶ ಪಡೆದಿತ್ತು. ಆದರೆ ಮೊದಲ ಕ್ವಾಲಿಫೈಯರ್ನಲ್ಲಿ ಸೋಲು ಕಂಡಿತ್ತು. ಮಾಯಾ ಜಿಂಕೆಯಂತೆ ಕಾಡುತ್ತಿರುವ ಐಪಿಎಲ್ ಟ್ರೋಫಿಯನ್ನು ಚಿನ್ನಸ್ವಾಮಿ ಅಂಗಳದಲ್ಲಿ ಕಟ್ಟಿ ಹಾಕಲು ಆರ್ಸಿಬಿ ರಣ ತಂತ್ರವನ್ನು ರೂಪಿಸಿಕೊಳ್ಳುತ್ತಿದೆ.

ಆರ್ಸಿಬಿ ಸ್ಟಾರ್ ಆಟಗಾರರನ್ನೇ ಟಾರ್ಗೆಟ್ ಮಾಡುತ್ತದೆ. ಇದರಿಂದ ತಂಡದ ಬ್ರ್ಯಾಡ್ ವ್ಯಾಲ್ಯೂ ಸಹ ಬೆಳೆಯುತ್ತದೆ. ಇದನ್ನೇ ಮನಗೊಂಡು ಆರ್ಸಿಬಿ ಸ್ಟಾರ್ ಆಟಗಾರರಿಗೆ ಮಣೆ ಹಾಕುತ್ತಲೆ ಬಂದಿದೆ. ಐಪಿಎಲ್ ಹರಾಜು ಇತಿಹಾಸವನ್ನು ನೋಡಿದರೆ, ಆರ್ಸಿಬಿ ಖ್ಯಾತ ನಾಮರಿಗೆ ಹಣದ ಹೊಳೆಯನ್ನೇ ಹರಿಸಿದೆ. ಈ ಬಾರಿ ಯಾವ ಆಟಗಾರರಿಗೆ ಆರ್ಸಿಬಿ ಬಿಡ್ ಮಾಡಬಹುದು ಎಂಬ ಬಗ್ಗೆ ವರದಿ ಇಲ್ಲಿದೆ.
ಆರ್ಸಿಬಿ ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈಗ ಬರುತ್ತಿರುವ ವರದಿಗಳನ್ನು ನಂಬುವುದಾದರೆ ಆರ್ಸಿಬಿ ಫಾಫ್ ಡುಪ್ಲೇಸಿಸ್ ಅವರನ್ನು ಕೈ ಬಿಡುವ ಸಾಧ್ಯತೆ ದಟ್ಟವಾಗಿದೆ. ಇವರ ಸ್ಥಾನಕ್ಕೆ ಆರ್ಸಿಬಿ ಓಪನರ್ ಬ್ಯಾಟರ್ ಹಾಗೂ ನಾಯಕನನ್ನು ಆರ್ಸಿಬಿ ಹುಡುಕುತ್ತಿದೆ. ಈ ಎಲ್ಲ ಗುಣಗಳನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಮೂರು ಆಟಗಾರರು ಎದ್ದು ಕಾಣುತ್ತಾರೆ.
ಕನ್ನಡಿಗರಿಗೆ ಆರ್ಸಿಬಿ ತಂಡದಲ್ಲಿ ಹೆಚ್ಚಾಗಿ ಅವಕಾಶ ನೀಡಿಲ್ಲ. ಈ ಒಂದು ಕಳಂಕವನ್ನು ಕಳೆಚಲು ಆರ್ಸಿಬಿ ಈ ಬಾರಿ ಸನ್ನದ್ಧವಾಗಿದ್ದು, ಆರ್ಸಿಬಿ ಮಾಜಿ ಆಟಗಾರನಿಗೆ ಮಣೆ ಹಾಕುವ ಸಾಧ್ಯತೆ ಇದೆ. ಕರ್ನಾಟಕದ ಸೂಪರ್ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಅವರು ಈ ಬಾರಿ ಹರಾಜಿನ ಅಂಗಳಕ್ಕೆ ಬರುವುದು ಬಹುತೇಕ ಪಕ್ಕಾ ಆಗಿದೆ. ಎಲ್ಎಸ್ಜಿ ಇವರನ್ನು ಕೈ ಬಿಟ್ಟಲ್ಲಿ ಇವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸಬಲ್ಲರು.
ರಾಹುಲ್ ಅವರ ಮೇಲೆ ಆರ್ಸಿಬಿ ಒಂದು ಕಣ್ಣು ನೆಟ್ಟಿದೆ. ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ಲ್ಯಾನ್ ಬೆಂಗಳೂರು ತಂಡದ್ದಾಗಿದೆ. ಈ ಮೂಲಕ ನಾಯಕ, ಓಪನರ್ ಆಟಗಾರ ಸಿಕ್ಕಂತೆ ಆಗುತ್ತದೆ.

ಟೀಮ್ ಇಂಡಿಯಾಕ್ಕೆ ಟಿ20 ವಿಶ್ವಕಪ್ ಮುಕುಟ ತೊಡಿಸಿರುವ ರೋಹಿತ್ ಶರ್ಮಾ ಅವರನ್ನು ಪಡೆಯಲು ಮಾಲೀಕರು ಚಿತ್ತ ನೆಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಅಸಮಾಧಾನ ಸರಿಯಾಗದೇ ಇದ್ದಲ್ಲಿ, ರೋಹಿತ್ ಐಪಿಎಲ್ ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಟಿ20 ವಿಶ್ವಕಪ್ ಗೆದ್ದಾಗಿನಿಂದ ರೋಹಿತ್ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಇವರನ್ನು ತಂಡಕ್ಕೆ ಬರಮಾಡಿಕೊಳ್ಳಲು ಆರ್ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾಗ ರೋಹಿತ್, ಐದು ಬಾರಿ ಐಪಿಎಲ್ ಟ್ರೋಫಿ ಎತ್ತಿದ್ದರು.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ಡೇವಿಡ್ ವಾರ್ನರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿಕೊಂಡಿದೆ. ಈ ಪ್ಲೇಯರ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಇವರನ್ನು ತಮ್ಮ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಸಹ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸಾಲಿನಲ್ಲಿ ಆರ್ಸಿಬಿ ಸಹ ಸೇರಿದೆ. ಇವರನ್ನು ಖರೀದಿಸಿದ್ದೇ ಆದಲ್ಲಿ ಇವರಿಗೂ ನಾಯಕತ್ವದ ಗುಣಗಳಿವೆ. ಅಲ್ಲದೆ ಸನ್ರೈಸರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.