ರಿಷಭ್ ಪಂತ್ ಅಪಘಾತದಲ್ಲಿ ಗಾಯಕ್ಕೆ ತುತ್ತಾದ ನಂತರ ಕೆಎಸ್ ಭರತ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಅವರು ಬ್ಯಾಟ್ ಅಬ್ಬರಿಸಲಿಲ್ಲ. ನಂತರ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ರನ್ ಬಾರಿಸುವಲ್ಲಿ ವಿಫಲರಾದರು.
ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅವಕಾಶ ಸಿಗದ ನಂತರ ಅವರು ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದರು. ಎರಡೂ ಪಂದ್ಯಗಳಲ್ಲಿ ಭರತ್ ಅವರ ಬ್ಯಾಟ್ ಮೌನಕ್ಕೆ ಜಾರಿತ್ತು. 7 ಪಂದ್ಯಗಳಲ್ಲಿ ಭರತ್ 20ರ ಸರಾಸರಿಯಲ್ಲಿ 221 ರನ್ ಗಳಿಸಿದ್ದಾರೆ. ಹೀಗಿರುವಾಗ ಅವರನ್ನು ತಂಡದಿಂದ ಕೈಬಿಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಇಶಾನ್ ಕಿಶನ್ ಪ್ರಸ್ತುತ ಮೈದಾನದಿಂದ ದೂರವಿದ್ದು, ದೇಶೀಯ ಕ್ರಿಕೆಟ್ ಆಡದೆ ಅವರ ಭಾರತ ತಂಡಕ್ಕೆ ವಾಪಸಾತಿ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದಲ್ಲಿ ಭರತ್ ಸ್ಥಾನವನ್ನು ಬದಲಿಸಬಲ್ಲ ಮೂವರು ವಿಕೆಟ್ ಕೀಪರ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕ ಅಕ್ಷಯ್ ವಾಡ್ಕರ್. ಈ 29 ವರ್ಷದ ವಿಕೆಟ್ಕೀಪರ್ ಬ್ಯಾಟ್ಸ್ಮನ್ನೊಂದಿಗೆ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. 46 ಪ್ರಥಮ ದರ್ಜೆ ಪಂದ್ಯಗಳಲ್ಲಿ 51ರ ಸರಾಸರಿಯಲ್ಲಿ 2747 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕ ಹಾಗೂ 14 ಅರ್ಧಶತ ಸೇರಿವೆ. ವಾಡ್ಕರ್ ಒತ್ತಡದ ಸಂದರ್ಭಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಬ್ಯಾಟರ್. ಅಲ್ಲದೆ ಎದುರಾಳಿಯ ರಣ ತಂತ್ರವನ್ನು ಬುಡಮೇಲು ಮಾಡಿ ರನ್ ಗಳಿಸುವ ಬ್ಯಾಟ್ಸ್ಮನ್ ಎಂದು ಕರೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಭಾರತ್ ಬದಲಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದು.

ಪಂಜಾಬ್ ವಿಕೆಟ್ ಕೀಪರ್ ಪ್ರಭಾಸಿಮ್ರಾನ್ ಸಿಂಗ್ ಅದ್ಭುತ ಬ್ಯಾಟ್ಸ್ಮನ್. ಉತ್ತಮ ವಿಕೆಟ್ ಕೀಪಿಂಗ್ ಮಾಡುವುದರ ಜೊತೆಗೆ, ಅವರು ಬ್ಯಾಟ್ನಿಂದಲೂ ಅಬ್ಬರಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಈ ಋತುವಿನ ರಣಜಿ ಟೂರ್ನಿಯಲ್ಲಿ ಅವರು ಎರಡು ಶತಕಗಳನ್ನು ಗಳಿಸಿದ್ದಾರೆ. ಕರ್ನಾಟಕದಂತಹ ಬಲಿಷ್ಠ ತಂಡದ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಪ್ರಭಾಸಿಮ್ರನ್ ಶತಕ ಸಿಡಿಸಿದ್ದರು. 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 1276 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳಿವೆ. ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಲ್ಲೂ ಶತಕ ಬಾರಿಸಿದ್ದರು. ಇವರು ಸಹ ಭರತ್ ಸ್ಥಾನಕ್ಕೆ ಪೈಪೋಟಿ ನೀಡಬಲ್ಲರು.
ತಮಿಳುನಾಡು ವಿಕೆಟ್ಕೀಪರ್ ಬ್ಯಾಟ್ಸ್ಮನ್ ನಾರಾಯಣ್ ಜಗದೀಸನ್ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಚಂಡೀಗಢ ವಿರುದ್ಧ ಮೂರನೇ ಶತಕ ಗಳಿಸಿದ ಇವರು ಅಬ್ಬರಿಸಿದ್ದರು. ಅಲ್ಲದೆ ರೈಲ್ವೇಸ್ ವಿರುದ್ಧ 245 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಗೋವಾ ವಿರುದ್ಧ 75 ರನ್ ಗಳಿಸಿದ್ದರು. ವಿಕೆಟ್ ಕೀಪರ್ ಜೊತೆಗೆ ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಅವರು ತಂಡಕ್ಕೆ ಬಂದರೆ ಭಾರತದ ಬ್ಯಾಟಿಂಗ್ ಬಲಿಷ್ಠವಾಗಲಿದೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರ ಸರಾಸರಿ 50 ರಷ್ಟಿದೆ.

ಈ ಮೂವರಲ್ಲಿ ಯಾರಿಗೆ ತಂಡದಲ್ಲಿ ಸ್ಥಾನ ಲಭಿಸುತ್ತದೆ ಎಂಬುದು ಕುತೂಹಲ ಹೆಚ್ಚಿಸಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಇನ್ನು ತಂಡವನ್ನು ಪ್ರಕಟಿಸುವುದು ಬಾಕಿ ಇದೆ. ಆಗ ಆಯ್ಕೆದಾರರು ಇವರನ್ನು ಪರಿಗಣಿಸಬಹುದು.