ಕೇಪ್ ಟೌನ್, ಫೆಬ್ರವರಿ 24: ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ಕರಾರುವಾಕ್ ಬೌಲಿಂಗ್ ಅವರ ಎದುರಿಸಲಾಗದೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ತಿಣುಕಿ, ಭಾರತದ ವಿರುದ್ಧ ಮಂಡಿಯೂರಿದರು. ಮೂರನೇ ಪಂದ್ಯ ಹಾಗೂ ಸರಣಿಯನ್ನು ಭಾರತ ಕೈವಶ ಪಡಿಸಿಕೊಂಡು ಸಂಭ್ರಮಿಸಿತು.
ಗಾಯಾಳು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮ ಅವರು ಪಂದ್ಯದುದ್ದಕ್ಕೂ ರೋಚಕ, ಆತಂಕ ಕ್ಷಣಗಳನ್ನು ಎದುರಿಸಿ ಕೊನೆಗೆ ಗೆಲುವಿನ ನಗೆ ಬೀರಿದರು.
173ರನ್ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡವು 20 ಓವರ್ ಗಳಲ್ಲಿ 165/6 ಮಾತ್ರ ಗಳಿಸಲು ಸಾಧ್ಯವಾಯಿತು. ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಉತ್ತಮ ಆರಂಭ ಪಡೆದರೂ ಮುಂದುವರೆಸಲಾಗಲಿಲ್ಲ. 24ರನ್ ಗಳಿಸಿದ್ದ ಮಿಲ್ಲರ್ ಅವರ ವಿಕೆಟ್ ಸುರೇಶ್ ರೈನಾ ಪಾಲಾಯಿತು.
ಜೆಪಿ ಡುಮಿನಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ 41 ಎಸೆತಗಳಲ್ಲಿ 55ರನ್ (2 ಬೌಂಡರಿ, 3 ಸಿಕ್ಸರ್) ಹಾಗೂ ಕ್ರಿಶ್ಚಿಯನ್ ಜೊನ್ಕರ್ ಅವರು 49ರನ್ (24ಎಸೆತ, 5 ಬೌಂಡರಿ, 2ಸಿಕ್ಸರ್) ಗಳಿಸಿ ಭಾರತಕ್ಕೆ ಆತಂಕ ತಂದಿದ್ದರು. ಆದರೆ, ಡುಮಿನಿಯನ್ನು ಶಾರ್ದೂಲ್ ಅವರು ಪೆವಿಲಿಯನ್ ಗೆ ಕಳಿಸಿದರೆ, ಜೋನ್ಕರ್ ವಿಕೆಟ್ ಭುವಿ ಪಾಲಾಯಿತು. 6 ಎಸೆತಗಳಲ್ಲಿ 16ರನ್ ಗಳಿಸಿದ್ದ ಬೆಹರ್ದೀನ್ ಅವರು ನಿರಾಶೆಯಿಂದ ಸೋಲಿನ ಕಹಿ ಅನುಭವಿಸಬೇಕಾಯಿತು.
ಭುವನೇಶ್ವರ್ ಕುಮಾರ್ 2, ಬೂಮ್ರಾ, ಶಾರ್ದೂಲ್, ಹಾರ್ದಿಕ್ , ಸುರೇಶ್ ರೈನಾ ತಲಾ 1 ವಿಕೆಟ್ ಗಳಿಸಿದರು.