
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಈಗ 1-1 ಅಂತರದಿಂದ ಸಮಬಲಗೊಂಡಿದೆ. ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಮುಂದಿನ ಎರಡು ಪಂದ್ಯಗಳನ್ನು ಟೀಮ್ ಇಂಡಿಯಾ ಸೋಲ ಬಾರದು. ಹಾಗಿದ್ದರೆ ಮಾತ್ರ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳು ಭಾರತಕ್ಕೆ ನಿರ್ಣಾಯಕ ಎಂದಿದ್ದಾರೆ ಚೇತೇಶ್ವರ್ ಪೂಜಾರ.
ಭಾರತ ಮೊದಲಿಗೆ ಪ್ರಮುಖವಾಗಿರುವ ಮೂರನೇ ಟೆಸ್ಟ್ ಪಂದ್ಯದತ್ತ ಚಿತ್ತವನ್ನು ನೆಡಲಿದೆ ಎಂದು ಚೇತೇಶ್ವರ್ ಪೂಜಾರ ಹೇಳಿದ್ದಾರೆ. ಫೆಬ್ರವರಿ 4ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ಸಾಗಲಿದೆ. ಹೀಗಾಗಿ ಭಾರತಕ್ಕೆ ಈ ಪಂದ್ಯ ಅಗ್ನಿಪರೀಕ್ಷೆಯಾಗಿರಲಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿದೆ.
"ನಾವು ಭಾರತದಲ್ಲಿ ಈವರೆಗೆ ಕೇವಲ ಒಂದು ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡಿದ್ದೇವೆ ಅದು ಎಸ್ಜಿ ಚೆಂಡಿನಲ್ಲಿ. ದೇಶೀಯ ಪಂದ್ಯಗಳಲ್ಲಿ ನಾವು ಕೂಕಬುರ ಚೆಂಡಿನಲ್ಲಿ ಮಾತ್ರವೇ ಆಡಿದ್ದೇವೆ. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಭಾಗವಹಿಸುವ ದೃಷ್ಟಿಯಿಂದ ಈ ಪಂದ್ಯ ಬಹಳ ಮಹತ್ವದ್ದಾಗಿದೆ. ಹೀಗಾಗಿ ನಾವು ಅದರತ್ತ ಚಿತ್ತ ನೆಟ್ಟಿದ್ದೇವೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ.
"ನಾನು ಸಾಕಷ್ಟು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರೂ ನನಗೂ ಪಿಂಕ್ ಬಾಲ್ನಲ್ಲಿ ಹೆಚ್ಚಾಗಿ ಆಡಿದ ಅನುಭವ ಇಲ್ಲ. ಸರಣಿಯಲ್ಲಿ ಒಂದು ಪಂದ್ಯವನ್ನು ಮಾತ್ರವೇ ಪಿಂಕ್ ಬಾಲ್ನಲ್ಲಿ ಆಡುವುದರಿಂದ ಅನುಭವ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಭಾವಿಸುವುದಿಲ್ಲ. ಮುಂದೆ ಹೆಚ್ಚಿನ ಪಂದ್ಯಗಳನ್ನು ಆಡಿದಂತೆ ಅನುಭವ ಪಡೆಯುತ್ತಾ ಹೋಗುತ್ತೇವೆ. ತಂಡವಾಗಿ ನಾವು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಗುರಿಯನ್ನು ಹೊಂದಿದ್ದೇವೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿರುವಂತೆಯೇ ಚೇತೇಶ್ವರ್ ಪೂಜಾರ ಮುಂಬರುವ ಐಪಿಎಲ್ ಟೂರ್ನಿಗೆ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪೂಜಾರ 50 ಲಕ್ಷ ರೂಪಾಯಿಗಳಿಗೆ ಹರಾಜಾಗಿದ್ದಾರೆ. ಈ ಮೂಲಕ 2014ರ ನಂತರ ಮತ್ತೆ ಐಪಿಎಲ್ ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಂತಾಗಿದೆ.