ನವದೆಹಲಿ, ಡಿಸೆಂಬರ್ 05: ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಶ್ರೀಲಂಕಾ 373 ಸ್ಕೋರಿಗೆ ಆಲೌಟ್ ಆಗಿದೆ. ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ ಚೇತರಿಸಿಕೊಂಡು 246/5ಸ್ಕೋರ್ ಮಾಡಿದೆ. ಶ್ರೀಲಂಕಾಕ್ಕೆ ಗೆಲ್ಲಲು 410ರನ್ ಗಳ ಟಾರ್ಗೆಟ್ ನೀಡಲಾಗಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮ ನಾಯಕ
410ರನ್ ಗುರಿ ಬೆನ್ನು ಹತ್ತಿರುವ ಶ್ರೀಲಂಕಾ ತಂಡವು ನಾಲ್ಕನೇ ದಿನದ ಅಂತ್ಯಕ್ಕೆ 31/3 ಸ್ಕೋರ್ ಮಾಡಿದೆ. ರವೀಂದ್ರ ಜಡೇಜ 2, ಶಮಿ 1 ವಿಕೆಟ್ ಗಳಿಸಿದರು. ಅಂತಿಮ ದಿನದಂದು ಪಂದ್ಯ ಗೆಲ್ಲಲು ಶ್ರೀಲಂಕಾಕ್ಕೆ 379ರನ್ ಅಗತ್ಯವಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೋಮವಾರದಂದು ಏಂಜೆಲೋ ಮ್ಯಾಥ್ಯೂಸ್ ಹಾಗೂ ನಾಯಕ ಚಂಡಿಮಾಲ್ ಭರ್ಜರಿ ಶತಕ ಸಿಡಿಸಿದ್ದರು. ನಂತರ 135.3 ಓವರ್ ಗಳಲ್ಲಿ 373 ಸ್ಕೋರಿಗೆ ಆಲೌಟ್ ಆಗಿದೆ.
ವಿರಾಟ್ ಕೊಹ್ಲಿ ದ್ವಿಶತಕ(243ರನ್) ಹಾಗೂ ಮುರಳಿ ವಿಜಯ್(155) ಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 536/7 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. ಶ್ರೀಲಂಕಾ ವಿರುದ್ಧ ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳಲು ಟೀಂ ಇಂಡಿಯಾ ಯತ್ನಿಸಿತು.
ಮುರಳಿ ವಿಜಯ್ 9 ರನ್, ಅಜಿಂಕ್ಯ ರಹಾನೆ 10ರನ್ ಗಳಿಸಿ ಔಟಾದರು. ಶಿಖರ್ ಧವನ್ 67ರನ್, ಚೇತೇಶ್ವರ್ ಪೂಜಾರಾ 49, ವಿರಾಟ್ ಕೊಹ್ಲಿ 50, ರೋಹಿತ್ ಶರ್ಮ ಅಜೇಯ 50ರನ್ ಗಳಿಸಿ ತಂಡದ ಮೊತ್ತವನ್ನು 246/5 ಕ್ಕೇರಿಸಿದರು. ಈ ಮೂಲಕ ಶ್ರೀಲಂಕಾ ತಂಡಕ್ಕೆ ಗೆಲ್ಲಲು 410ರನ್ ಗುರಿ ನೀಡಲಾಗಿದೆ.