ದೇಶೀಯ ಕ್ರಿಕೆಟ್ನ ಹೊಸ ಆವೃತ್ತಿ ಆರಂಭಕ್ಕೂ ಮುನ್ನ ಕರ್ನಾಟಕ ರಾಜ್ಯ ಕ್ರಿಕೆಟ್ನಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿವೆ. ಕರ್ನಾಟಕ ಕ್ರಿಕೆಟ್ ತಂಡದ ಮೂವರು ಪ್ರಮುಖ ಆಟಗಾರರು ರಾಜ್ಯ ತಂಡವನ್ನು ತೊರೆದು ನೆರೆ ರಾಜ್ಯಗಳಿಗೆ ವಲಸೆ ಹೋಗಲು ಸಜ್ಜಾಗಿದ್ದಾರೆ. ಇದೇ ದೇಶೀಯ ಋತುವಿನಲ್ಲಿ ಈ ಆಟಗಾರರು ಬೇರೆ ರಾಜ್ಯಗಳ ಪರವಾಗಿ ಆಡುವುದು ಖಚಿತವಾಗಿದೆ.
ಕರ್ನಾಟಕದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಬ್ಯಾಟರ್ಗಳಾದ ಕರುಣ್ ನಾಯರ್, ಕೆವಿ ಸಿದ್ಧಾರ್ಥ್, ರೋಹನ್ ಕದಂ ಈ ನಾಲ್ವರು 2023-24ರ ದೇಶೀಯ ಋತುವಿನಲ್ಲಿ ಬೇರೆ ರಾಜ್ಯದ ಪರವಾಗಿ ಆಡಲು ಸಜ್ಜಾಗಿರುವ ಕ್ರಿಕೆಟಿಗರು. ಈ ಕ್ರಿಕೆಟಿಗರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ನಿರಾಕ್ಷೇಪಣಾ ಪತ್ರವನ್ನು ಕೂಡ ನೀಡಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕೇರಳ ತಂಡದ ಪರವಾಗಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಕೆವಿ ಸಿದ್ಧಾರ್ಥ್ ಮತ್ತು ರೋಹನ್ ಕದಂ ಗೋವಾ ರಾಜ್ಯದ ಪರವಾಗಿ ಆಡಲು ಮಾತುಗಕತೆಗಳು ನಡೆದಿವೆ. ಇನ್ನು ಹಿರಿಯ ಆಟಗಾರ ಕರುಣ್ ನಾಯರ್ ವಿದರ್ಭ ಪರವಾಗಿ ಆಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಾಕಷ್ಟು ಪ್ರತಿಭಾನ್ವಿತ ಕ್ರಿಕೆಟಿಗರು ಬರುತ್ತಿರುವ ಕಾರಣದಿಂದಾಗಿ ಈ ಆಟಗಾರರು ಎಲ್ಲಾ ಮಾದರಿಯಲ್ಲಿಯೂ ತಾವು ನಿರೀಕ್ಷಿತ ಪ್ರಮಾಣದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಲು ಸಾಧ್ಯವಾಗದ ಕಾರಣದಿಂದಾಗಿ ಹೊಸ ಅವಕಾಶಗಳತ್ತ ಈ ಆಟಗಾರರು ಚಿತ್ತ ನೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವಕಾಶವಿರುವ ಬೇರೆ ರಾಜ್ಯಗಳತ್ತ ಮುಖಮಾಡಿದ್ದಾರೆ.
ಬೇರೆ ರಾಜ್ಯದ ಪರ ಆಡುವುದು ಹೊಸತಲ್ಲ
ಇನ್ನು ಕರ್ನಾಟಕದ ಆಟಗಾರರು ಬೇರೆ ರಾಜ್ಯಗಳ ಪರವಾಗಿ ಆಡುವುದು ಇದೇನು ಹೊಸತಲ್ಲ. ಇತ್ತೀಚಿನ ವರ್ಷಗಳಲ್ಲೂ ಕೆಲ ಪ್ರಮುಖ ಕ್ರಿಕೆಟಿಗರು ಕೂಡ ಬೇರೆ ರಾಜ್ಯದ ಪಾರವಾಗಿ ಆಡಿರುವ ಸಾಕಷ್ಟು ಉದಾಹರಣೆಗಳು ಇವೆ. ಅದರಲ್ಲಿ ಪ್ರಮುಖವಾದವರೆಂದರೆ ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಕೆಬಿ ಪವನ್, ರೋನಿತ್ ಮೋರೆ, ಅಮಿತ್ ವರ್ಮಾ ಮತ್ತು ಪವನ್ ದೇಶ್ಪಾಂಡೆ.
ಕರ್ನಾಟಕದ ಮಾಜಿ ನಾಯಕ ರಾಬಿನ್ ಉತ್ತಪ್ಪ ಸೌರಾಷ್ಟ್ರ ಪರವಾಗಿ ಆಡಿದ್ದಲ್ಲದೆ ತಂಡವನ್ನು ಮುನ್ನಡೆಸಿದ್ದರು ಕೂಡ. ಗಣೇಶ್ ಸತೀಶ್ ವಿದರ್ಭ ಪರವಾಗಿ ಆಡಿದ್ದರೆ ಕೆಬಿ ಪವನ್ ಹಾಗೂ ಅಮಿತ್ ವರ್ಮಾ ಕೇರಳ ಪರವಾಗಿ, ರೋನಿತ್ ಮೋರೆ ಹಿಮಾಚಲ ಪ್ರದೇಶದ ಪರವಾಗಿ ಮತ್ತು ಪವನ್ ದೇಶ್ಪಾಂಡೆ ಪಾಂಡಿಚೇರಿ ಪರವಾಗಿ ಆಡಿದ್ದರು.