ಧರ್ಮಶಾಲ, ಮಾರ್ಚ್ 23: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಕಣಕ್ಕಿಳಿಯುವರೇ? ಕಾದುನೋಡಿ, ಸದ್ಯಕ್ಕೆ ಕೊಹ್ಲಿಗೆ ಆಸರೆಯಾಗಿ ಮುಂಬೈನ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ನಾಯಕ ವಿರಾಟ್ ಕೊಹ್ಲಿ ಅವರು ಬಲಭುಜದ ನೋವಿನಿಂದ ಬಳಲುತ್ತಿದ್ದು, ಇನ್ನೂ ಗುಣಮುಖರಾಗಿಲ್ಲ. ಮಾರ್ಚ್ 25ರಿಂದ ಧರ್ಮಶಾಲದಲ್ಲಿ ಪಂದ್ಯ ಆರಂಭಗೊಳ್ಳಲಿದೆ. [ಕೊಹ್ಲಿ ಅಣಕಿಸಿದ ಮ್ಯಾಕ್ಸ್ ವೆಲ್, ಟ್ವಿಟ್ಟರ್ ನಿಂದ ಫ್ಯಾನ್ಸ್ ಗರಂ]
ಗುರುವಾರದ ತಯಾರಿ: ನಾಯಕ ಕೊಹ್ಲಿ ಅವರು ಮೈದಾನದಲ್ಲಿ ಕಾಣಿಸಿಕೊಂಡರೂ, ಬ್ಯಾಟ್ ಹಿಡಿದು ನೆಟ್ ಅಭ್ಯಾಸ ಮಾಡಲಿಲ್ಲ. ಭುಜಕ್ಕೆ ಇನ್ನಷ್ಟು ವಿಶ್ರಾಂತಿ ಕೊಡುತ್ತಿದ್ದಾರೆ. ನಾಳೆ ದೈಹಿಕ ಪರೀಕ್ಷೆ ನಡೆಸಲಾಗುತ್ತಿದ್ದು, ನಂತರ ಕೊಹ್ಲಿ ಆಡುವುದರ ಬಗ್ಗೆ ನಿರ್ಧರಿಸಲಾಗುತ್ತದೆ.
ಶ್ರೇಯಸ್ ಕಳೆದ ಎರಡು ಋತುವಿನಿಂದ ಮುಂಬೈ ಪರ ಭರ್ಜರಿ ಪ್ರದರ್ಶನ ನೀಡಿದ್ದಾರಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಮೋಘ ದ್ವಿಶತಕ ಸಿಡಿಸಿದ್ದರು.
ಶಮಿ ಆಯ್ಕೆ ಇಲ್ಲ: ಗಾಯಗೊಂಡು ಗುಣಮುಖರಾಗಿರುವ ವೇಗಿ ಮೊಹಮ್ಮದ್ ಶಮಿ ಅವರು ಅಂತಿಮ ಟೆಸ್ಟ್ ಪಂದ್ಯ ಆಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, 15 ಮಂದಿ ತಂಡದಲ್ಲೂ ಇಲ್ಲದ ಶಮಿ ಅವರಿಗೆ ಅವಕಾಶ ಸಿಗುವುದು ಸಾಧ್ಯವಿಲ್ಲ. ವಿಜಯ್ ಹಜಾರೆ ಫೈನಲ್ ಆಡುವುದರ ಮೂಲಕ ಫಿಟ್ನೆಸ್ ಪರೀಕ್ಷೆ ನಡೆಸಲಾಗಿತ್ತು ಎಂದು ಬಿಸಿಸಿಐ ಹೇಳಿದೆ.