ದಶಕದ ಬಳಿಕ ಭಾರತಕ್ಕೆ ಏಕದಿನ ವಿಶ್ವಕಪ್ ಪಂದ್ಯಾವಳಿ ವಾಪಸಾಗಿದೆ. 2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದಾಗ ಆತಿಥೇಯ ತಂಡ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಮತ್ತೆ ಈ ಬಾರಿ ಇತಿಹಾಸ ಮರುಕಳಿಸಲಿ ಎನ್ನುವ ಆಸೆ ಕೋಟ್ಯಂತರ ಭಾರತೀಯರದ್ದಾಗಿದೆ.
ಏಕದಿನ ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಅಳೆದು ತೂಗಿ 15 ಆಟಗಾರರಿಗೆ ಮಣೆ ಹಾಕಲಾಗಿದೆ. ಕ್ರಿಕೆಟ್ ಪಂಡಿತರು ಈ ತಂಡದಲ್ಲಿ ಹಲವು ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ಘೋಷಿತ ತಂಡದ ಪ್ರದರ್ಶನದ ಮೇಲೆ ಸಂಪೂರ್ಣ ನಂಬಿಕೆಯನ್ನು ಇಟ್ಟಿದೆ. ಅಲ್ಲದೆ 12 ವರ್ಷಗಳ ಬಳಿಕ ಮತ್ತೊಮ್ಮೆ ಟೀಮ್ ಇಂಡಿಯಾ ವಿಶ್ವಕಪ್ಗೆ ಮುತ್ತಿಡುವ ವಿಶ್ವಾಸವನ್ನು ಹೊಂದಿದೆ.

ಈ ಬಾರಿ 100ಕ್ಕೆ 100 ಪ್ರತಿಷತ ವಿಶ್ವಕಪ್ ಗೆಲ್ಲುವ ಅವಕಾಶ ಇದೆ ಎಂದು ನಂಬಲಾಗಿದೆ. ಇದಕ್ಕೆ ಪೂರಕವಾಗಿ ಐದು ಕಾರಣಗಳು ನಿಜಕ್ಕೂ ಅಭಿಮಾನಿಗಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ.
ಈ ಬಾರಿಯ ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾದ ಆಟಗಾರರಿಗೆ ತವರಿನ ಪಿಚ್ಗಳ ಮರ್ಮ ಚೆನ್ನಾಗಿ ಅರಿವಿರುತ್ತದೆ. ತವರಿನ ಅಭಿಮಾನಿಗಳ ಬೆಂಬಲವೂ ಹೆಚ್ಚಾಗಿ ಆಟಗಾರರಿಗೆ ಸಿಗುತ್ತದೆ. ಭಾರತದಲ್ಲಿ ನಡೆಯುವ ಶ್ರೀಮಂತ ಲೀಗ್ ಐಪಿಎಲ್ನಲ್ಲಿ ವಿದೇಶಿ ಆಟಗಾರರು ಆಡಿದರೂ ಸಹ, ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟ. ಅಲ್ಲದೆ ರೋಹಿತ್ ಪಡೆಗೆ ತವರಿನ ಲಾಭ ಸಿಗಲಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಮೂರನೇ ಬಾರಿ ಏಕದಿನ ವಿಶ್ವಕಪ್ ಎತ್ತಿಹಿಡಿಯುವುದು ಭಾರತ ತಂಡಕ್ಕೆ ಸುಲಭವಾಗಲಿದೆ.
ಟೀಮ್ ಇಂಡಿಯಾದಲ್ಲಿ ಸ್ಟಾರ್ ಬ್ಯಾಟರ್ ಗಳ ದಂಡೇ ಇದೆ. ಈ ಆಟಗಾರರು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ. ಅಲ್ಲದೆ ವಿಶ್ವಕಪ್ಗೆ ಆಯ್ಕೆಯಾದ ತಂಡದಲ್ಲಿ ಬೆಸ್ಟ್ ಟಾಪ್ ಆರ್ಡರ್ ಬ್ಯಾಟರ್ ಇದ್ದಾರೆ. ಈ ಸ್ಟಾರ್ ಆಟಗಾರರು ನೆಲಕಚ್ಚಿ ನಿಂತಲ್ಲಿ ಎದುರಾಳಿ ಬೌಲರ್ ಗಳ ನಿದ್ದೆಗೆಡಿಸುವುದು ಫಿಕ್ಸ್. ಟಾಪ್ ಆರ್ಡರ್ ನಲ್ಲಿ ಕಾಣಿಸಿಕೊಳ್ಳಲಿರುವ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇವರು ಯಾವುದೇ ಸಮಯದಲ್ಲಾದ್ರೂ ಪಂದ್ಯದ ಗತಿಯನ್ನು ಬದಲಿಸಬಲ್ಲರು.
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಇನ್ನು ಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್ ಬಲಾಢ್ಯವಾಗಿದ್ದು, ತಂಡದ ಬ್ಯಾಟಿಂಗ್ಗೆ ಮತ್ತಷ್ಟು ಶಕ್ತಿ ಸಿಕ್ಕಿದೆ.
ಭಾರತದ ಪಿಚ್ಗಳು ಹೆಚ್ಚಾಗಿ ಸ್ಪಿನ್ ಬೌಲರ್ ಗಳಿಗೆ ನೆರವು ನೀಡುತ್ತವೆ. ಟೀಮ್ ಇಂಡಿಯಾದಲ್ಲಿ ಮೂವರು ನುರಿತ ಸ್ಪಿನ್ ಬೌಲರ್ ಗಳು ಇದ್ದಾರೆ. ಚೈನಾಮೆನ್ ಬೌಲರ್ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಬಿಗುವಿನ ಸ್ಪಿನ್ ದಾಳಿ ಸಂಘಟಿಸಬಲ್ಲರು. ಇವರ ಸ್ಪಿನ್ ಮೋಡಿಯನ್ನು ಎದುರಿಸುವಲ್ಲಿ ವಿದೇಶಿ ಸ್ಟಾರ್ ಬ್ಯಾಟರ್ ಗಳು ಸಹ ಕಂಗಾಲಾಗುತ್ತಾರೆ. ಈ ಜೋಡಿ ಮೋಡಿಯ ದಾಳಿ ನಡೆಸಿದರೆ ಗೆಲುವು ಸಾಧ್ಯ.
ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್ ಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಬೌಲರ್. ಅಲ್ಲದೆ ನಿಖರವಾಗಿ ಯಾರ್ಕರ್ ಎಸೆಯುವುದರಲ್ಲಿ ಬುಮ್ರಾ ನಿಸ್ಸೀಮರು. ಇವರ ಜೊತೆ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಜೊತೆಗೆ ಹಾರ್ದಿಕ್ ಪಾಂಡ್ಯ ಕೂಡ ಎದುರಾಳಿಗಳನ್ನು ಕಟ್ಟಿಹಾಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಟೀಮ್ ಇಂಡಿಯಾದ ಬ್ಯಾಲೆನ್ಸ್ ತುಂಬಾ ಚೆನ್ನಾಗಿದೆ. ಆಲ್ರೌಂಡರ್ ಗಳ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮೂವರು ಆಟಗಾರರು ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಹೀಗಾಗಿ ತಂಡ ಬ್ಯಾಲೆನ್ಸ್ ಆಗಿ ಕಾಣುತ್ತಿದೆ. ಅಲ್ಲದೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲೂ ಒಂದಾಗಿದೆ.