ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ಗುರವಾರ ಓವಲ್ನಲ್ಲಿ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆ ಭಾರತ ತಂಡದ್ದಾಗಿದೆ. ಇನ್ನು ಇಂಗ್ಲೆಂಡ್ ತಂಡ ಸಹ ಪಂದ್ಯದ ಗೆಲುವಿನ ಮೇಲೆ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ಐದನೇ ಟೆಸ್ಟ್ ಗೆಲುವಿಗೆ ಪ್ಲ್ಯಾನ್ ಮಾಡಿಕೊಂಡಿದ್ದು, ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಓವಲ್ ಅಂಗಳದಲ್ಲಿ ಟೀಮ್ ಇಂಡಿಯಾ ಸಾಧನೆ ಉತ್ತಮವಾಗಿಲ್ಲ. ಟೀಮ್ ಇಂಡಿಯಾ ಈ ಅಂಗಳದಲ್ಲಿ 2 ಗೆಲುವು ದಾಖಲಿಸಿದೆ. ಈಗ ಮೂರನೇ ಗೆಲುವಿನ ಹುಡುಕಾಟದಲ್ಲಿದೆ. ಕಳೆದ ಬಾರಿ ಈ ಮೈದಾನದಲ್ಲಿ ಪಂದ್ಯ ನಡೆದಾಗ ರೋಹಿತ್ ಶರ್ಮಾ ಶತಕ ಬಾರಿಸಿ ಅಬ್ಬರಿಸಿದ್ದರು. ಈಗ ಅವರು ನಿವೃತ್ತರಾಗಿದ್ದಾರೆ. ಹೀಗಾಗಿ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅವರ ಮೇಲೆ ನೆಟ್ಟಿದೆ. ಗಿಲ್ ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐದನೇ ಪಂದ್ಯದಲ್ಲೂ ಇದೇ ಪ್ರದರ್ಶನ ಮುಂದುವರೆಸಿದಲ್ಲಿ, ಗಿಲ್ ಮತ್ತೆ ಹಲವು ದಾಖಲೆ ಬರೆಯಬಹುದು.

ಈಗಾಗಲೇ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ನಾಲ್ಕು ಬದಲಾವಣೆಗಳೊಂದಿಗೆ ತಂಡ ಕಣಕ್ಕೆ ಇಳಿಯಲಿದೆ. ನಾಯಕ ಬೆನ್ ಸ್ಟೋಕ್ಸ್ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ಅವರು ಭುಜದ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರಲ್ಲದೇ ಇನ್ನು ಮೂವರು ಆಟಗಾರರನ್ನು ಮ್ಯಾನೇಜ್ಮೆಂಟ್ ಕೈ ಬಿಟ್ಟಿದೆ.
ಪ್ರಸಕ್ತ ಸರಣಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆಟಗಾರರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಸ್ಥಾನ. ಇವರು ಈಗಾಗಲೇ ತಾವೊಬ್ಬ ನುರಿತ ಬ್ಯಾಟರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹೀಗಾಗಿ ಇವರ ಮೇಲೆ ವಿಶ್ವಾಸ ಹೆಚ್ಚಿದೆ. ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿ ಅಬ್ಬರಿಸುವ ಅನಿವಾರ್ಯತೆ ಇದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಆಡುತ್ತಾರೋ ಅಥವಾ ಅಭಿಮನ್ಯು ಈಶ್ವರನ್ ಆಡುತ್ತಾರೋ ಎಂಬ ಪ್ರಶ್ನೆ ಉದ್ಭವಿಸಿದೆ. ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಈ ಪಂದ್ಯದಲ್ಲಿ ಅಬ್ಬರದ ಆಟವನ್ನು ಆಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇನ್ನು ರಿಷಭ್ ಪಂತ್ ಈ ಸರಣಿಯಿಂದ ಹೊರ ನಡೆದಿದ್ದರಿಂದ ಧ್ರುವ್ ಜುರೇಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಆಲ್ರೌಂಡರ್ ಕೋಟಾವನ್ನು ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಸೀಲ್ ಮಾಡಿಕೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಸ್ಥಾನದ ಮೇಲೂ ಅಪಾಯದ ತೂಗುಗತ್ತಿ ನೇತಾಡುತ್ತಿದೆ.
ಜಸ್ಪ್ರೀತ್ ಬುಮ್ರಾ ಆಡ್ತಾರಾ ಎಂಬ ಪ್ರಶ್ನೆಗೆ, ಬುಧವಾರ ಶುಭಮನ್ ಗಿಲ್ ಉತ್ತರ ನೀಡಿದ್ದು, ಪಿಚ್ ನೋಡಿಕೊಂಡು ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಆಡುವುದು ಖಚಿತವಾದಂತೆ ಕಾಣುತ್ತಿದೆ. ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ ಇಲೆವೆನ್ ಭಾಗವಾಗಲಿದ್ದಾರೆ. ಆದರೆ ಮೂರನೇ ವೇಗದ ಬೌಲರ್ ಎಂಬ ಪ್ರಶ್ನೆ ಉದ್ಭವಿಸಿದೆ. ನುರಿತ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಅವರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.