ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ತಂಡವನ್ನು ಪ್ರಕಟಿಸಲಾಗಿದೆ. ಯುವ ಹಾಗೂ ಅನುಭವಿ ಆಟಗಾರರಿಂದ ತಂಡ ಕೂಡಿದೆ. ಪ್ರಕಟಿತ ತಂಡದಲ್ಲಿ 8 ಆಟಗಾರರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಮಾಡುತ್ತಿದ್ದಾರೆ. ಹಾಗಿದ್ದರೆ ಆ ಪ್ಲೇಯರ್ಸ್ ಯಾರು ಇಲ್ಲಿದೆ ವರದಿ.
ಈಗಾಗಲೇ ಆಸೀಸ್ ಪ್ರವಾಸದಲ್ಲಿ ಎರಡು ಬಾರಿ ಟ್ರೋಫಿಯನ್ನು ಗೆದ್ದಿರುವ ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಬಿಸಿಸಿಐ ಆಯ್ಕೆ ಸಮಿತಿ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಬಲಿಷ್ಠ ತಂಡವನ್ನು ಕಟ್ಟಿದೆ. ಜಸ್ಪ್ರಿತ್ ಬುಮ್ರಾ ಅವರಿಗೆ ಉಪನಾಯಕ ಸ್ಥಾನ ನೀಡಲಾಗಿದೆ. 18 ಜನರ ಪ್ರಕಟಿತ ತಂಡದಲ್ಲಿ ಯುವ ಆಟಗಾರರು ಹೆಚ್ಚಿದ್ದಾರೆ. ಇದರಲ್ಲಿ ಇದೇ ಮೊದಲ ಬಾರಿಗೆ ಆಸೀಸ್ ಪ್ರವಾಸವನ್ನು ಬೆಳೆಸುತ್ತಿರುವ ಆಟಗಾರರ ಸಂಖ್ಯೆ ಎಂಟು.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಅಭಿಮನ್ಯು ಈಶ್ವರನ್ಗೆ ಅವಕಾಶ ನೀಡಲಾಗಿದೆ. ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡುವುದು ಪಕ್ಕಾ ಆಗಿತ್ತು. ಅಭಿಮನ್ಯು ಈಶ್ವರನ್ ಅವರನ್ನು ದೇಶೀಯ ಟೂರ್ನಿಯಲ್ಲಿ ನೀಡಿದ ಪ್ರದರ್ಶನ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಅಭಿಮನ್ಯು ಅವರಿಗೆ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ. ಇವರಿಬ್ಬರೂ ಸಹ ಇದೇ ಮೊದಲ ಬಾರಿಗೆ ಆಸೀಸ್ ಪ್ರವಾಸವನ್ನು ಬೆಳೆಸಲಿದ್ದಾರೆ.
ಇನ್ನು ತಂಡದಲ್ಲಿ ಕಾಣಿಸಿಕೊಳ್ಳುವ ವೇಗಿ ಹರ್ಷಿತ್ ರಾಣಾ ಹಾಗೂ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸಹ ಇದೇ ಮೊದಲ ಬಾರಿಗೆ ಭಾರತ ತಂಡದ ಜೊತೆ ಆಸ್ಟ್ರೇಲಿಯಾ ಫ್ಲೈಟ್ ಹತ್ತಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಬಾಂಗ್ಲಾದೇಶದ ವಿರುದ್ಧ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿ ಅಬ್ಬರಿಸಿದ್ದಾರೆ. ಹರ್ಷಿತ್ ರಾಣಾ ಚೊಚ್ಚಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿರುವ ಸರ್ಫರಾಜ್ ಖಾನ್ ಅವರಿಗೂ ಆಸ್ಟ್ರೇಲಿಯಾ ಪ್ರವಾಸವನ್ನು ಮಾಡುವ ಅವಕಾಶ ನೀಡಲಾಗಿದೆ. ಸರ್ಫರಾಜ್ ಹಾಗೂ ಜುರೇಲ್ ಪ್ರಸಕ್ತ ವರ್ಷ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಪದಾರ್ಪಣಾ ಟೆಸ್ಟ್ ಪಂದ್ಯವನ್ನು ಆಡಿದ್ದರು.
ಗಾಯದ ಬಳಿಕ ಪ್ರಸಿದ್ಧ ಕೃಷ್ಣ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಇನ್ನು ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಕಾಶ್ ದೀಪ್ ಸಹ ಕಾಂಗರೂ ನಾಡಿನಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ತಮ್ಮ ಪರ್ಫೆಕ್ಟ್ ಲೈನ್ ಹಾಗೂ ಲೆಂತ್ ಮೂಲಕವೇ ಈ ಇಬ್ಬರೂ ಆಟಗಾರರು ಎದುರಾಳಿಗಳನ್ನು ಕಾಡಬಲ್ಲರು. ಹೀಗಾಗಿ ಇವರಿಗೆ ಆಯ್ಕೆ ಸಮಿತಿ ಅವಕಾಶವನ್ನು ನೀಡಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಯಾವ ಯುವ ಪ್ಲೇಯರ್ ಮಿಂಚುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.