
ಭಾರತದ ಮಾಜಿ ಕ್ರಿಕೆಟಿಗೆ ಆಕಾಶ್ ಚೋಪ್ರಾ ಭಾರತದ ಸ್ಪಿನ್ನರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈತ ಸದ್ಯ ವಿಶ್ವದ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಹಾಡಿಹೊಗಳಿದ್ದಾರೆ. ರವಿಚಂದ್ರನ್ ಅಶ್ವಿನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಕಾಶ್ ಚೋಪ್ರಾ ಅವರನ್ನು ಶ್ರೇಷ್ಠ ಸ್ಪಿನ್ನರ್ ಎಂದು ಕರೆದಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರವಿಚಂದ್ರನ್ ಅಶ್ವಿನ್ ಭಾರತ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 25 ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಆಸ್ಟ್ರೇಲಿಯಾ ತಂಡಕ್ಕೆ ಮಾರಕವಾಗಿ ಪರಿಣಮಿಸಿದರು. ಅಹಮದಾಬಾದ್ನಲ್ಲಿ ಬ್ಯಾಟಿಂಗ್ಗೆ ನೆರವಾಗುವ ಪಿಚ್ನಲ್ಲಿ ಕೂಡ ಅಶ್ವಿನ್ 6 ವಿಕೆಟ್ ಪಡೆದುಕೊಂಡಿದ್ದರು.
ಅನುಭವಿ ಆಫ್ ಸ್ಪಿನ್ನರ್ಗಳು ಸ್ಪಿನ್ ಬೌಲಿಂಗ್ಗೆ ನೆರವು ನೀಡುವ ಪಿಚ್ನಲ್ಲಿ ಮಾತ್ರ ವಿಕೆಟ್ ತೆಗೆಯಬಲ್ಲರು ಎಂದು ಹೇಳಿದ್ದ ವಿಮರ್ಶಕರನ್ನು ಅಶ್ವಿನ್ ಸುಮ್ಮನಾಗಿಸಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಅಶ್ವಿನ್ ಬೌಲಿಂಗ್ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ. ಅಶ್ವಿನ್ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡುವ ಮೂಲಕ ಭಾರತದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು ಎಂದು ಅವರು ಹೇಳಿದ್ದಾರೆ.

ಯಾವುದೇ ಪಿಚ್ನಲ್ಲೂ ಉತ್ತಮ ಬೌಲರ್
"ಎಲ್ಲರೂ ನಿರೀಕ್ಷೆ ಮಾಡಿದಂತೆಯೇ ನಡೆದಿದೆ, ರವಿಚಂದ್ರನ್ ಅಶ್ವಿನ್ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಯಾವುದೇ ರೀತಿಯ ಪಿಚ್ನಲ್ಲೂ ಅತ್ಯುತ್ತಮ ಬೌಲರ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ: ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ರವಿಚಂದ್ರನ್ ಅಶ್ವಿನ್ ಜೊತೆಗೆ ರವೀಂದ್ರ ಜಡೇಜಾ ಪ್ರದರ್ಶನ ಬಗ್ಗೆ ಕೂಡ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಡೇಜಾ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಿಂದಲೂ ಭಾರತದ ಗೆಲುವಿನಲ್ಲಿ ಸಹಾಯಕವಾದರು ಎಂದು ಹೇಳಿದರು. ಸರಣಿಯಲ್ಲಿ 4 ಪಂದ್ಯಗಳಿಂದ ಜಡೇಜಾ 135 ರನ್ ಗಳಿಸಿದರು ಮತ್ತು 22 ವಿಕೆಟ್ ಪಡೆದರು. ಜಡೇಜಾ ಮತ್ತು ಅಶ್ವಿನ್ರನ್ನು ಸರಣಿ ಶ್ರೇಷ್ಠ ಆಟಗಾರರು ಎಂದು ಘೋಷಿಸಲಾಯಿತು.
ಜಡೇಜಾ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ದೀರ್ಘಕಾಲ ಗಾಯಗೊಂಡು ಕ್ರಿಕೆಟ್ನಿಂದ ಹೊರಗುಳಿದಿದ್ದರು ಕೂಡ ವಾಪಸ್ ಬಂದ ನಂತರ ಅಮೋಘ ಪ್ರದರ್ಶನ ನೀಡಿದರು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಅಕ್ಷರ್ ಪಟೇಲ್ ಆಟದ ಬಗ್ಗೆ ಮೆಚ್ಚುಗೆ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4 ಪಂದ್ಯಗಳಲ್ಲಿ 264 ರನ್ ಗಳಿಸಿ ಮಿಂಚಿದ ಅಕ್ಷರ್ ಪಟೇಲ್ ಬಗ್ಗೆ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದರು. ಅಕ್ಷರ್ ಪಟೇಲ್ ಬ್ಯಾಟಿಂಗ್ನಲ್ಲಿ ಸಾಕಷ್ಟು ಸುಧಾರಿಸಿದ್ದಾರೆ ಎಂದು ಹೇಳಿದರು. ಬೌಲಿಂಗ್ನಲ್ಲಿ ಅಕ್ಷರ್ ಮಿಂಚುತ್ತಾರೆ ಎಂದುಕೊಳ್ಳಲಾಗಿತ್ತು ಆದರೆ ಅವರು ಬ್ಯಾಟಿಂಗ್ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
"ಅಕ್ಷರ್ ಪಟೇಲ್ಗೆ ಬೌಲಿಂಗ್ ಮಾಡಲು ಹೆಚ್ಚಿನ ಓವರ್ಗಳು ಸಿಗಲಿಲ್ಲ, ಆದರೆ ಬ್ಯಾಟಿಂಗ್ನಲ್ಲಿ ಅಮೂಲ್ಯವಾದ ರನ್ ಗಳಿಸಿದರು. ಅವರ ಬ್ಯಾಟಿಂಗ್ ಸಹಾಯದಿಂದ ದೆಹಲಿ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಯಿತು. ಇಲ್ಲದಿದ್ದರೆ ದೆಹಲಿ ಟೆಸ್ಟ್ನಲ್ಲಿ ಗೆಲ್ಲುವುದು ಅಸಾಧ್ಯವಾಗುತ್ತಿತ್ತು" ಎಂದು ಹೇಳಿದರು.