
ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಆಕಾಶ್ ಚೋಪ್ರ ಸಾಕಷ್ಟು ಖ್ಯಾತರಾಗಿದ್ದಾರೆ. ಕ್ರಿಕೆಟ್ ಹೊರತು ಪಡಿಸಿ ಬೇರೆ ಬೇರೆ ವಿಚಾರಗಳ ಬಗ್ಗೆ ಆಕಾಶ್ ಚೋಪ್ರ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಹಲವು ಬಾರಿ ಸುದ್ದಿಯಾಗಿದ್ದಾರೆ. ದೇಶದಲ್ಲಿ ಸಂಚಲವನ್ನುಂಟು ಮಾಡಿದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಎರಡು ಚಾನೆಲ್ಗಳನ್ನು ಟ್ರೋಲ್ ಮಾಡಿದ್ದಾರೆ ಆಕಾಶ್ ಚೋಪ್ರ.
ದೇಶಾದ್ಯಂತ ಸಂಚಲನವನ್ನುಂಟು ಮಾಡಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಶಾಂತ್ ಮಾಜಿ ಪ್ರೇಯಸಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗಿದ್ದರು. ಸುಶಾಂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ಸಂಬಂಧಿತ ಆರೋಪದ ಹಿನ್ನೆಲೆಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ರಿಯಾ ಚಕ್ರವರ್ತಿಯನ್ನು ಸೆಪ್ಟೆಂಬರ್ 8 ರಂದು ಬಂಧಿಸಿತ್ತು.
ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಬೆಳವಣಿಗೆಯ ನಂತರ ಮಾಜಿ ಕ್ರಿಕೆಟಿಗ ಆಕಾಶ ಚೋಪ್ರ ಪ್ರಕರಣದ ಬಗ್ಗೆ ತಾನು ಗೊಂದಲದಲ್ಲಿದ್ದೇನೆ ಎಂಬುದನ್ನು ಟ್ವೀಟ್ನಲ್ಲಿ ಮಾಡುವ ಮೂಲಕ ಕೇಳಿಕೊಂಡಿದ್ದಾರೆ.
"ಹಾಗಾದರೆ ಕಳೆದ ಒಂದು ತಿಂಗಳ ಕಾಲ ರಿಯಾ ಚಕ್ರವರ್ತಿ ಯಾಕಾಗಿ ಜೈಲ್ನಲ್ಲಿದ್ದರು. ನಾನು ಗೊಂದಲದಲ್ಲಿದ್ದೇನೆ. ಕ್ಷಮಿಸಿ, ಆದರೆ ನನಗೆ ಮಾತ್ರ ಹೀಗನ್ನಿಸುತ್ತಿದೆಯಾ?" ಎಂದು ಆಕಾಶ್ ಚೋಪ್ರ ಟ್ವಿಟ್ ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಇನ್ನೊಂದು ಟ್ವೀಟ್ನಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡ ಮಟ್ಟದ ಸಂಚಲಕ್ಕೆ ಕಾರಣವಾಗಿದ್ದ ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್ನೌ ವಾಹಿನಿಯ ಬಗ್ಗೆ ತಮಾಷೆಯಾಗಿ ಕಾಲೆಳೆದಿದ್ದಾರೆ. "ರಿಪಬ್ಲಿಕ್ ಆಫ್ ಇಂಡಿಯಾ ಈಗ ಕೇಳುತ್ತಿದೆ, ಸಮಯ ಈಗ ಬದಲಾಗಲಿದೆಯಾ" ಎಂದು ಟ್ರೋಲ್ ಮಾಡಿದ್ದಾರೆ.