
ಸತತ ನಾಲ್ಕನೇ ಪಂದ್ಯವನ್ನು ಸೋತ ಬಳಿಕವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ನಲ್ಲಿ ಪ್ಲೇಆಪ್ ಹಂತಕ್ಕೆ ಅವಕಾಶವನ್ನು ಗಿಟ್ಟಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಮೂರನೇ ತಂಡವಾಗಿ ಪ್ರವೇಶ ಗಿಟ್ಟಿಸಿಕೊಂಡಿರುವ ಕಾರಣ ಎರಡು ಪಂದ್ಯಗಳನ್ನು ಗೆದ್ದರೆ ಮಾತ್ರವೇ ಫೈನಲ್ ಹಂತಕ್ಕೆ ಟಿಕೆಟ್ ದೊರೆಯಲಿದೆ. ಈ ಬಗ್ಗೆ ಮಾತನಾಡಿರುವ ಆರ್ಸಿಬಿಯ ಪ್ರಮುಖ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ತಂಡದ ಗೆಲುವಿನ ಬಗ್ಗೆ ಸಂಪೂರ್ಣ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ಬರೆದಿರುವ ಕಾಲಂನಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಎತ್ತಿಹಿಡಿಯುವ ಬಗ್ಗೆ ಡಿವಿಲಿಯರ್ಸ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಸತತ ನಾಲ್ಕು ಸೋಲುಗಳ ಬಳಿಕ ಈಗ ನಾವು ಗೆಲುವಿನ ಕ್ಷಣಗಳನ್ನು ಮರಳಿ ಪಡೆಯಲು ಸಾಧ್ಯವೇ? ಚೊಚ್ಚಲ ಐಪಿಎಲ್ ಪ್ರಶಸ್ತಿ ಹಾಗೂ ನಮ್ಮ ಮಧ್ಯೆ ಉಳಿಸಿರುವ ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಲು ಸಾಧ್ಯವೇ? ಹೌದು ಅದು ಸಾದ್ಯವಿದೆ.." ಎಂದು ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ವಿಶ್ವಾಸದಿಂದ ಬರೆದುಕೊಂಡಿದ್ದಾರೆ.
"ಐಪಿಎಲ್ನಂತಾ ಟೂರ್ನಿಯಲ್ಲಿ ಯಾವುದೇ ತಂಡ ಯಾವುದೇ ತಂಡವನ್ನು ನೀಡಿದ ದಿನದಲ್ಲಿ ಸೋಲಿಸಲು ಸಾದ್ಯವಿದೆ. ಸೋಲಿಗೂ ಗೆಲುವಿಗೂ ಇಲ್ಲಿ ತುಂಬಾ ಸಣ್ಣದಾದ ಅಂತರವಿದೆ. ಯಾವಾಗ ಕೆಲ ಸಂಗತಿಗಳಲ್ಲಿ ಬದಲಾವಣೆಗಳು ಸಂಭವಿಸುತ್ತದೋ ಆಗ ಇಡೀ ಫಲಿತಾಂಶವೇ ಬುಡಮೇಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ನಾವು ನಮ್ಮ ಮೂಲ ಯೋಜನೆಗೆ ಬದ್ಧರಾಗಿರಬೇಕಾಗುತ್ತದೆ ಅಥವಾ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಕೊರೊನಾ ವೈರಸ್ನ ಆತಂಕ ಭೀತಿಯ ಮಧ್ಯೆಯೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಆರ್ಸಿಬಿ ತಂಡದ ಅಭಿಮಾನಿಗಳು ಬೆಂಗಳೂರು ಹಾಗೂ ವಿಶ್ವಾದ್ಯಂತ ನಮ್ಮ ಆಟವನ್ನು ಮನೆಯಲ್ಲೇ ಕುಳಿತು ನೋಡುತ್ತಿರುತ್ತಾರೆ, ಅವರ ಮುಖದಲ್ಲಿ ಸಂತಸವನ್ನು ತರುವುದು ನಮ್ಮ ಜವಾಬ್ಧಾರಿಯಾಗಿದೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಎರಡನೇ ಸ್ಥಾನವನ್ನು ಪಡೆದುಕೊಂಡು ಪ್ಲೇಆಫ್ ಸ್ಥಾನಕ್ಕೇರುವ ಉತ್ತಮ ಅವಕಾಶವಿತ್ತು. ಆದರೆ ಡೆಲ್ಲಿ ವಿರುದ್ಧ ಸೋಲು ಕಂಡ ಕಾರಣ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಎಲಿಮಿನೇಟರ್ ಪಂದ್ಯವನ್ನು ಆಡಿ ಬಳಿಕ ಕ್ವಾಲಿಫಯರ್ ಪಂದ್ಯವನ್ನು ಗೆದ್ದು ಪೈನಲ್ಗೆ ಪ್ರವೇಶ ಪಡೆದುಕೊಳ್ಳಬೇಕಿದೆ.