ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಎಬಿ ಡಿವಿಲಿಯರ್ಸ್ ತಮ್ಮ ಸರಳ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ದೊಡ್ಡ ಆಟಗಾರನಾಗಿದ್ದರು, ಅವರ ಸರಳತೆ ಕೂಡ ಅಷ್ಟೇ ದೊಡ್ಡದಾಗಿದೆ. ಸದ್ಯ ಭಾರತದಲ್ಲಿರುವ ಎಬಿಡಿ ಮುಂಬೈನ ಸ್ಥಳೀಯ ಅಂಗಡಿಯೊಂದರಲ್ಲಿ ಟೀ ಕುಡಿಯುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರವಾಗಿ ಕೆಲಸ ಮಾಡಲಿದ್ದಾರೆ. ಯಾವ ರೀತಿಯ ಜವಾಬ್ದಾರಿ ವಹಿಸಲಿದ್ದಾರೆ ಎನ್ನುವ ಕುರಿತು ಇನ್ನೂ ನಿರ್ಧಾರವಾಗಿಲ್ಲವಾದರೂ, ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಸಹಾಯಕರಾಗಬಹುದು ಎನ್ನಲಾಗಿದೆ.
ಸದ್ಯ ತಂಡಕ್ಕಾಗಿ ಕೆಲಸ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಎಬಿಡಿ ಮುಂಬೈ ಭೇಟಿಯ ಸಮಯದಲ್ಲಿ ಸ್ಥಳೀಯ ಟೀ ಅಂಗಡಿಯಲ್ಲಿ ರಸ್ತೆ ಬದಿ ಕುಳಿತು ಟೀ ಸೇವಿಸಿದ್ದರು, ಆ ಫೋಟೊಗಳು ಈಗ ವೈರಲ್ ಆಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊಗಳಲ್ಲಿ ಎಬಿಡಿ ಮುಂಬೈನ ಸ್ಥಳೀಯ ಅಂಗಡಿಯ ಮೆಟ್ಟಿಲುಗಳ ಮೇಲೆ ಕುಳಿತು, ಟೀ ಸವಿಯುತ್ತಿರುವುದನ್ನು ನೋಡಬಹುದು.
ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಕೆ.ಎಲ್ ರಾಹುಲ್, ಬಲಿಷ್ಠ ತಂಡಗಳೆದುರು ಠುಸ್ ಪಟಾಕಿ
ಟೀ ಸ್ಟಾಲ್ಗೆ ಭೇಟಿ ನೀಡಿದ ಚಿತ್ರಗಳು ವೈರಲ್ ಆದ ನಂತರ ಟ್ವಿಟರ್ ಬಳಕೆದಾರರು ದಕ್ಷಿಣ ಆಫ್ರಿಕಾದ ಸೂಪರ್ಸ್ಟಾರ್ ಎಬಿಡಿ ಸರಳತೆ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿಮ್ಮಂತರ ದಿಗ್ಗಜರಿಗೆ ಮಾತ್ರ ಹೀಗೆ ಸರಳವಾಗಿರಲು ಸಾಧ್ಯ ಎಂದು ಕೊಂಡಾಡಿದ್ದಾರೆ.
ಅಭಿಮಾನಿಗಳ ಜೊತೆ ಕ್ರಿಕೆಟ್ ಆಡಿದ್ದ ಎಬಿಡಿ
ಮುಂಬೈ ಪ್ರವಾಸದ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು, ಭಾರತ ಮೊದಲ ವಿಶ್ವಕಪ್ ಗೆದ್ದ ಕಥೆಯನ್ನು ಹೊಂದಿದ್ದ '83' ಚಿತ್ರದಲ್ಲಿ ನಟಿಸಿದ್ದ ರಣವೀರ್ ಸಿಂಗ್ ಜೊತೆ ಕ್ರಿಕೆಟ್ ಕುರಿತಂತೆ ಚರ್ಚೆ ಮಾಡಿದ್ದರು. ಎರಡು ದಿನಗಳ ಹಿಂದೆ ಅವರು ಅಭಿಮಾನಿಗಳ ಜೊತೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಮಾತ್ರವಲ್ಲದೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರನ್ನು ಕೂಡ ಭೇಟಿ ಮಾಡಿದ್ದರು.
ಐಪಿಎಲ್ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಬಿಡುಗಡೆ ಮಾಡಲು ನವೆಂಬರ್ 15 ಕೊನೆಯ ದಿನಾಂಕವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದ್ದು, ಯಾವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಎಬಿ ಡಿವಿಲಿಯರ್ಸ್ ಫ್ರಾಂಚೈಸಿಗೆ ಸಲಹೆ ನೀಡುವ ಸಾಧ್ಯತೆ ಇದೆ.
2023ರ ಐಪಿಎಲ್ನಲ್ಲಿ ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಪರ ಇರುತ್ತೇನೆ ಎಂದು ಅವರು ಅಭಿಮಾನಿಗಳಿಗೆ ತಿಳಿಸಿದ್ದರು, ಆದರೆ ಮತ್ತೆ ಆಟಗಾರನಾಗಿ ಮೈದಾನಕ್ಕೆ ಇಳಿಯುವುದಿಲ್ಲ ಎನ್ನುವ ಮೂಲಕ ತಂಡದ ಮೆಂಟರ್ ಅಥವಾ ಕೋಚ್ ಆಗಿ ಬರುವ ಮುನ್ಸೂಚನೆಯನ್ನು ನೀಡಿದ್ದರು.