ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ವಿಶ್ವದಲ್ಲೇ ಈ ಫ್ರಾಂಚೈಸಿಗೆ ಅತಿ ಹೆಚ್ಚು ಹಿಂಬಾಲಕರು ಇದ್ದಾರೆ. ಆದರೆ ಈ ತಂಡ ಒಮ್ಮೆಯೂ ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗಿಲ್ಲ. ಈ ಬಾರಿಯ ಹರಾಜಿನಲ್ಲಿ ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದೆ. ಆರ್ಸಿಬಿ ಹರಾಜಿನಲ್ಲಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಚರ್ಚೆಗಳು ಆರಂಭವಾಗಿವೆ. ಈ ವೇಳೆ ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ.
ಆರ್ಸಿಬಿಗೆ ಮೊದಲಿನಿಂದಲೂ ಬೌಲಿಂಗ್ ವಿಭಾಗದ್ದೇ ದೊಡ್ಡ ಚಿಂತೆ. ಈ ಚಿಂತೆಯನ್ನು ಪರಿ ಹರಿಸುವ ನಿಟ್ಟಿನಲ್ಲಿ ಎಬಿಡಿ ಟೀಮ್ ಮ್ಯಾನೇಜ್ಮೆಂಟ್ಗೆ ಸಲಹೆ ನೀಡಿದ್ದಾರೆ. ಇವರು ಸೂಚಿಸಿದ ಆಟಗಾರರು ತಮ್ಮ ಬೌಲಿಂಗ್ನಿಂದಲೇ ಹೆಸರು ವಾಸಿ ಆಗಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಎಬಿಡಿ ಈ ನಾಲ್ಕು ಬೌಲರ್ಗಳನ್ನು ಆರ್ಸಿಬಿ ಖರೀದಿಸಿದರೆ ಬೆಸ್ಟ್ ಎಂದು ತಿಳಿಸಿದ್ದಾರೆ.

ಆರ್ಸಿಬಿ ಈ ನಾಲ್ಕು ಆಟಗಾರರನ್ನು ಖರೀದಿಸುವಲ್ಲಿ ಸಫಲವಾದಲ್ಲಿ ನಿಸ್ಸಂಶಯವಾಗಿ ಬೌಲಿಂಗ್ ಲೈನ್ ಅಪ್ ಬಲಾಢ್ಯ ಆಗುತ್ತದೆ. ಅಲ್ಲದೆ ಇವರು ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡುವ ಕಲೆಯನ್ನು ಹೊಂದಿದ್ದಾರೆ.
ಆರ್ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡಿರುವ ಸ್ಟಾರ್ ಬೌಲರ್ ಯುಜುವೇಂದ್ರ ಚಹಾಲ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬೇಕು. ಇವರೊಂದಿಗೆ ಆಫ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ಗೂ ಮಣೆ ಹಾಕಬೇಕು. ಇವರಿಬ್ಬರೂ ರಾಜಸ್ಥಾನ ರಾಯಲ್ಸ್ ಪರ ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಇವರಿಬ್ಬರೂ ಆರ್ಸಿಬಿ ಸೇರಿದರೆ ಬೆಸ್ಟ್ ಎಂದು ಎಬಿಡಿ ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ತಂಡ ವೇಗದ ಬೌಲರ್ ರೂಪದಲ್ಲಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ಇವರಿಗೆ ಸಾಥ್ ನೀಡಲು ಸಹ ವೇಗದ ಬೌಲರ್ಗಳು ಬೇಕು. ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕಗಿಸೊ ರಬಾಡ ಮತ್ತು ಕಳೆದ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿರುವ ಭವುನೇಶ್ವರ್ ಕುಮಾರ್ ಅವರನ್ನು ತಂಡ ಸೇರಿಸಿಕೊಳ್ಳಬೇಕು. ಈ ನಾಲ್ಕು ಆಟಗಾರರನ್ನು ತಂಡ ಸೇರಿಸಿಕೊಳ್ಳುವಲ್ಲಿ ಸಫಲವಾದಲ್ಲಿ ನಿಜಕ್ಕೂ ಆರ್ಸಿಬಿ ಬೌಲಿಂಗ್ ಲೈನ್ ಅಪ್ ಸುಧಾರಿಸುತ್ತದೆ ಎಂದು ಎಬಿಡಿ ತಿಳಿಸಿದ್ದಾರೆ.
ಆರ್ಸಿಬಿ ತನ್ನ ತಂಡದಲ್ಲಿ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ತಂಡ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ವಿರಾಟ್ ಕೊಹ್ಲಿ ಅವರಿಗೆ ಮಣೆ ಹಾಕಿದೆ. ರಜತ್ ಪಟಿದಾರ್ ಹಾಗೂ ಯಶ್ ದಯಾಳ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆರ್ಸಿಬಿ ಇನ್ನು ತಂಡದಲ್ಲಿ 22 ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಆರ್ಸಿಬಿ ಯಾವೆಲ್ಲಾ ಯೋಜನೆಗಳನ್ನು ಹಾಕಿಕೊಂಡಿದೆ ಎಂಬುದೇ ಕುತೂಹಲ ಮೂಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹರಾಜು ನಡೆಯಲಿದ್ದು, ಆರ್ಸಿಬಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂಬ ಬಗ್ಗೆ ಸ್ಪಷ್ಟ ಉತ್ತರ ಸಿಗಲಿದೆ.