2021ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ನಂತರ ಆರ್ಸಿಬಿ ತಂಡದ ನಾಯಕತ್ವ ತೊರೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. 2022ರ ಆವೃತ್ತಿಯಲ್ಲಿ ಫಾಫ್ ಡು ಪ್ಲೇಸಿಸ್ ಆರ್ ಸಿಬಿಯ ನಾಯಕರಾಗಿ ನೇಮಕವಾಗಿದ್ದರು. ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಈಗ ವಿರಾಟ್ ಕೊಹ್ಲಿ ನಾಯಕತ್ವ ತೊರೆದ ಬಗ್ಗೆ ಮಾತನಾಡಿದ್ದಾರೆ. ನಾಯಕತ್ವ ಬಿಟ್ಟದ್ದರಿಂದ ಕೊಹ್ಲಿಗೆ ಅನುಕೂಲವಾಯಿತು ಎಂದು ಹೇಳಿದರು.
ಭಾರತ ತಂಡ ಮತ್ತು ಆರ್ ಸಿಬಿಯ ನಾಯಕತ್ವ ತೊರೆದ ಬಳಿಕ ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಹೊಸದಾಗಿ ಕಾಣಿಸಿಕೊಂಡಿದ್ದಾರೆ ಎಂದು ಎಬಿಡಿ ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಆರ್ ಸಿಬಿಯ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೊಹ್ಲಿ ಅಜೇಯ 82 ರನ್ ಗಳಿಸಿದರು. ಅತ್ಯುತ್ತಮ ಫಾರ್ಮ್ನಲ್ಲಿರುವ ಅವರು ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಉತ್ತಮ ರನ್ ಗಳಿಸುವ ಭರವಸೆ ಮೂಡಿಸಿದ್ದಾರೆ.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್, "ನಾನು ಕೊಹ್ಲಿ ಬ್ಯಾಟಿಂಗ್ನಲ್ಲಿ ಹೆಚ್ಚಿನ ಬದಲಾವಣೆಯನ್ನು ನೋಡಿಲ್ಲ, ತಂತ್ರವು ಗಟ್ಟಿಯಾಗಿ ಕಾಣುತ್ತದೆ. ಕೊಹ್ಲಿ ವಿಕೆಟ್ ನಡುವೆ ಸಾಕಷ್ಟು ಶಕ್ತೊಯೊಂದಿಗೆ ಬ್ಯುಸಿಯಾಗಿದ್ದಾರೆ. ಈ ಆವೃತ್ತಿಯಲ್ಲಿ ಅವರು ಫ್ರೆಶ್ ಆಗಿ ಕಾಣಿಸಿಕೊಂಡಿದ್ದಾರೆ, ನಾನು ಅವರ ಕೆಲವು ಸಂದರ್ಶನಗಳನ್ನು ನೋಡಿದ್ದೇನೆ, ಅವರು ಮೊದಲಿಗಿಂತ ಹೆಚ್ಚಾಗಿ ನಗುತ್ತಾ ಮಾತನಾಡುತ್ತಿದ್ದಾರೆ." ಎಂದು ಎಬಿಡಿ ಹೇಳಿದರು.

ವಿಶ್ರಾಂತಿ ಪಡೆದುಕೊಂಡಿದ್ದು ಸಹಾಯ ಮಾಡಿದೆ
"2022ರ ಆವೃತ್ತಿಗೆ ಮುನ್ನ ನಾಯಕತ್ವವನ್ನು ತೊರೆಯುವುದು ವಿರಾಟ್ ಕೊಹ್ಲಿ ಅವರಿಗೆ ಹೆಚ್ಚಿನ ವಿಶ್ರಾಂತಿ ಸಿಗುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಅವರು ಅದ್ಭುತ ನಾಯಕರಾಗಿದ್ದರು, ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀರ್ಘಕಾಲದವರೆಗೆ ನಾಯಕತ್ವದ ಹೊರೆ ಹೊತ್ತಿದ್ದರು. ಅಂತಹ ಸಮಯದಲ್ಲಿ ನಿಮಗೆ ಹೆಚ್ಚಿನ ಸಮಯ ಸಿಗುವುದಿಲ್ಲ. ಇದೇ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ" ಎಂದು ಎಬಿಡಿ ಹೇಳಿದರು.
"ಚಿಲ್ ಮಾಡುವುದು, ಕುಟುಂಬದ ಜೊತೆ ಕಾಲ ಕಳೆಯುವುದು ಅಥವಾ ಕೆಲವು ಸ್ನೇಹಿತರ ಜೊತೆಯಾಗಿ ತಮಾಷೆ ಮಾಡುವುದು. ಈ ಆವೃತ್ತಿಯಲ್ಲಿ ಅವರ ಯಶಸ್ಸಿಗೆ ಇದೇ ಪ್ರಮುಖ ಕಾರಣ ಎಂದು ನಾನು ಭಾವಿಸುತ್ತೇನೆ. ಯಾವುದೇ ಒತ್ತಡವಿಲ್ಲದೆ ಮೋಜು ಮಾಡುತ್ತೀರಿ, ನಗುತ್ತೀರಿ, ಇದು ನೀವು ಆತ್ಮವಿಶ್ವಾಸದಿಂದ ಕ್ರಿಕೆಟ್ ಆಡಲು ಸಹಾಯ ಮಾಡುತ್ತದೆ, ಅವರು ಆ ಮೊದಲ ಇನ್ನಿಂಗ್ಸ್ನಲ್ಲಿ ಅವರು ಸುಲಭವಾಗಿ ರನ್ ಗಳಿಸುತ್ತಾರೆ. ಇನ್ನೂ ಉತ್ತಮ ಇನ್ನಿಂಗ್ಸ್ ಬರುತ್ತದೆ, ಮುಂದಿನ ಪಂದ್ಯಗಳಲ್ಲಿ ಹಲವು ಸ್ಫೋಟಕ ಇನ್ನಿಂಗ್ಸ್ಗಳನ್ನು ನೋಡಬಹುದು" ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಬ್ಯಾಟರ್ ಹೇಳಿದರು.

ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆ ಎಬಿಡಿ ಮಾತು
ಇತ್ತೀಚಿನ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಕಷ್ಟ ಪಡುತ್ತಿದ್ದಾರೆ, ಟಿ20 ಕ್ರಿಕೆಟ್ನಲ್ಲಿ ನಂಬರ್ 1 ರ್ಯಾಂಕಿಂಗ್ ಬೌಲರ್ ಆಗಿರುವ ಅವರ ಕಳಪೆ ಫಾರ್ಮ್ ಬಗ್ಗೆ ಕೂಡ ಎಬಿಡಿ ವಿಲಿಯರ್ಸ್ ಮಾತನಾಡಿದ್ದಾರೆ. "ಸೂರ್ಯಕುಮಾರ್ ಯಾದವ್ ಯಾವುದೇ ಗೊಂದಲಕ್ಕೆ ಒಳಗಾಗದೆ ಆಡಬೇಕು, ಅವರ ಆಟದ ಯೋಜನೆಯನ್ನು ಬದಲಾಯಿಸಬಾರದು, ಕಳೆದ ವರ್ಷ ಏನು ಮಾಡಿದ್ದರೋ ಅದನ್ನು ಮುಂದುವರೆಸುವ ಬಗ್ಗೆ ಚಿಂತಿಸಬೇಕು, ಸತತವಾಗಿ ರನ್ ಗಳಿಸುತ್ತಿದ್ದಾಗ ಏನು ಮಾಡುತ್ತಿದ್ದೇ ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು" ಎಂದು ಎಬಿಡಿ ಸಲಹೆ ನೀಡಿದರು.