
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಮುಂಬೈ ವಿರುದ್ದದ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರದಾಟದ ಮಧ್ಯೆಯೂ ಅದ್ಭುತ ದಾಳಿಯನ್ನು ಸಂಘಟಿಸಿ ಮಿಂಚಿದರು. ಈ ರೋಚಕ ಪಂದ್ಯದ ಬಳಿಕ ವಾಶಿಂಗ್ಟನ್ ಸುಂದರ್ ತಮ್ಮ ತಂಡದ ಪ್ರಮುಖ ಆಟಗಾರನನ್ನು ಸಕಲಕಲಾವಲ್ಲಭ ಎಂದು ಕರೆದಿದ್ದಾರೆ.
ಆರ್ಸಿಬಿ ಆಟಗಾರ ವಾಶಿಂಗ್ಟನ್ ಸುಂದರ್ ಸಕಲಕಲಾವಲ್ಲಭ ಎಂದು ಕರೆದಿದ್ದು ಬೇರೆ ಯಾರನ್ನೂ ಅಲ್ಲ. ಅದು ಆರ್ಸಿಬಿಯ ಬ್ಯಾಟಿಂಗ್ ಆಧಾರ ಸ್ತಂಭ ಎಬಿ ಡಿವಿಲಿಯರ್ಸ್ ಅವರನ್ನು. ಅದಕ್ಕೆ ಕಾರಣ ತಂಡದಲ್ಲಿ ಎಬಿ ಡಿವಿಲಿಯರ್ಸ್ ನಿರ್ವಹಿಸುವ ಪಾತ್ರ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಡಿವಿಲಿಯರ್ಸ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದರು.
ಹಿಂದಿನ ಎರಡು ಪಂದ್ಯಗಳಲ್ಲಿ ಆರ್ಸಿಬಿ ತಂಡದಲ್ಲಿ ಜೋಶುವ ಫಿಲಿಪ್ಪೆ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದರಾದರೂ ಅವರಿಂದ ನಿರೀಕ್ಷಿಸಿ ಪ್ರದರ್ಶನ ಕಂಡು ಬಂದಿರಲಿಲ್ಲ. ಹೀಗಾಗಿ ಮುಂಬೈ ವಿರುದ್ದದ ಪಂದ್ಯದಲ್ಲಿ ಫಿಲಿಪ್ಪೆ ಅವರನ್ನು ಆಡುವ ಬಳಗದಿಂದ ಹೊರಗಿಡಲಾಗಿತ್ತು. ತಂಡದಲ್ಲಿ ಸಮತೋಲನ ಕಾಪಾಡುವ ದೃಷ್ಠಿಯಿಂದ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪರ್ ಜವಾಬ್ಧಾರಿಯನ್ನು ಹೊತ್ತಿದ್ದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ ಡಿವಿಲಿಯರ್ಸ್ ಅರ್ಧ ಶತಕವನ್ನು ಗಳಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ ವಾಶಿಂಗ್ಟನ್ ಸುಂದರ್ ಎಬಿ ಡಿವಿಲಿಯರ್ಸ್ ನಿರ್ವಹಿಸಲು ಸಾಧ್ಯವಾಗದ ಯಾವುದಾದರೂ ಕೆಲ ಜಗತ್ತಿನಲ್ಲಿ ಇದೆಯಾ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದರು.
'ಆತ ನಿರ್ವಹಿಸಲು ಸಾದ್ಯವಾಗದ ಒಂದು ಕೆಲಸವನ್ನು ನೀವು ಹೇಳಿ. ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಮಾಡಲು ಆತ ಯಾವಾಗಲೂ ಹೆಚ್ಚಿನ ಸಂತೋಷದೊಂದಿಗೆ ಸಿದ್ಧನಿರುತ್ತಾರೆ. ಕಳೆದ ಹಲವು ವರ್ಷಗಳಿಂದ ಆರ್ಸಿಬಿಗೆ ಇದನ್ನು ಡಿವಿಲಿಯರ್ಸ್ ಮಾಡಿಕೊಂಡು ಬರುತ್ತಿದ್ದಾರೆ. ವಿಕೆಟ್ ಕೀಪರ್ ಆಗಿ ಎಬಿಡಿ ಕಣಕ್ಕಿಳಿದ ಕಾರಣ ತಂಡದಲ್ಲಿ ಹೆಚ್ಚಿನ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಯಿತು' ಎಂದು ವಾಶಿಂಗ್ಟನ್ ಸುಂದರ್ ಹೇಳಿದ್ದಾರೆ.