ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆಗಳು ನಡೆದಿವೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಪುಟಿದೇಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಈ ವೇಳೆ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿವೆ. ಇನ್ನು ಜಸ್ಪ್ರೀತ್ ಬುಮ್ರಾ ವರ್ಕ್ ಲೋಡ್ ಬಗ್ಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲಿ ಬುಮ್ರಾ ಅವರ ಕೆಲಸದ ಹೊರೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ದೂರಿದ್ದಾರೆ.
ಎಬಿಡಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ವರ್ಕ್ ಲೋಡ್ ಬಗ್ಗೆ ಮಾತನಾಡಿದ್ದಾರೆ. ಸದ್ಯ ಜಸ್ಪ್ರೀತ್ ಬುಮ್ರಾ ಮೂರು ಫಾರ್ಮೆಟ್ಗಳಲ್ಲಿ ಅಪಾಯಕಾರಿ ಬೌಲರ್. ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಆಡುವುದು ತಂಡಕ್ಕೆ ಮುಖ್ಯ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್ ಅವರ ಜೊತೆಗೂ ತಂಡ ಕೆಲಸದ ಹೊರೆಯನ್ನು ತಗ್ಗಿಸುವ ಬಗ್ಗೆ ಮಾತುಗಳನ್ನು ಆಡಿತ್ತು. ಇನ್ನು ಬುಮ್ರಾ ಈ ಸರಣಿಯ ಮೂರು ಪಂದ್ಯಗಳನ್ನು ಆಡುವ ನಿರ್ಧಾರವನ್ನು ವೈದ್ಯರ ಸಲಹೆ ಮೇಲೆ ಪಡೆದಿರಬಹುದು ಎಂದು ತಿಳಿಸಿದ್ದಾರೆ.

ಬುಮ್ರಾ ವೈದ್ಯರ ಮಾರ್ಗದರ್ಶನದಲ್ಲಿ ಈ ಸಲಹೆಯನ್ನು ಪಡೆದಿದ್ದಲ್ಲಿ ಅದಕ್ಕೆ ನಾವು ಗೌರವ ಸಲ್ಲಿಸಬೇಕು. ಇನ್ನು ವರ್ಕ್ ಲೋಡ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ತಂಡ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಬಿಡಿ ಹೇಳಿದ್ದಾರೆ. ಬುಮ್ರಾ ಅಷ್ಟು ಪಂದ್ಯಗಳಿಗೆ ಫಿಟ್ ಆಗಿದ್ದರೆ ಮಾತ್ರ ಅವರು ಆಡಬೇಕು. ಇಲ್ಲದಿದ್ದರೆ ಅವರು ಮುನ್ನೆಚ್ಚರಿಕೆ ಪಡೆಯುವುದು ಸೂಕ್ತ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಆಡುತ್ತಾರೋ ಇಲ್ಲವೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎಂದಿದ್ದಾರೆ.
ಇದೇ ವಿಷಯದ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ಧಿನ್ ಸಹ ಮಾತನಾಡಿದ್ದಾರೆ. ಟೀಮ್ ಇಂಡಿಯಾ ಸದ್ಯ ಬುಮ್ರಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬೇರೆ ಬೌಲರ್ಗಳಿಗೂ ತಂಡದಲ್ಲಿ ಅವಕಾಶ ನೀಡಬೇಕು. ಅಜರ್, ಎರಡನೇ ಪಂದ್ಯದಲ್ಲಿ ಕುಲ್ದೀಪ್ಗೆ ಅವಕಾಶ ನೀಡಬೇಕು ಎಂದು ಭಾವಿಸುತ್ತಾರೆ.

ಲೀಡ್ಸ್ ಅಂಗಳದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಮುನ್ನಡೆಸಿದ ಶುಭಮನ್ ಗಿಲ್ ಅವರ ಬಗ್ಗೆಯೂ ಅಜರ್ ಮಾತನಾಡಿದ್ದಾರೆ. ಒಂದೇ ಪಂದ್ಯದಲ್ಲಿ ಅವರ ನಾಯಕತ್ವ ಪ್ರಶ್ನಿಸುವುದು ಸರಿಯಲ್ಲ. ಅವರಿಗೆ ಸಮಯ ಹಾಗೂ ಬೆಂಬಲವನ್ನು ನೀಡಬೇಕು. ಪ್ರತಿ ಪ್ಲೇಯರ್ಗೆ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಸಮಯ ಬೇಕು. ಹೀಗಾಗಿ ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಅಜರುದ್ಧಿನ್ ತಿಳಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಎಡ್ಜ್ಬಸ್ಟನ್ನಲ್ಲಿ ಜುಲೈ 3ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಪುಟಿದೇಳುವ ಆಸೆಯನ್ನು ಭಾರತ ತಂಡ ಹಾಕಿಕೊಂಡಿದೆ.