ಲಕ್ನೋ: ಭರವಸೆಯ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಅವರ ಶತಕದ ನೆರವಿನಿಂದ ರೆಸ್ಟ್ ಆಫ್ ಇಂಡಿಯಾ ತಂಡ ಇರಾನಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡಕ್ಕೆ ಪ್ರತಿ ಉತ್ತರ ನೀಡಲು ಸಜ್ಜಾಗಿದೆ.
ಮುಂಬೈ ತಂಡ ಮೂರನೇ ದಿನದ ಆರಂಭದಲ್ಲಿ 9 ವಿಕೆಟ್ಗೆ 536 ರನ್ ಗಳಿಂದ ಆಟ ಮುಂದುವರಿಸಿ, ಒಂದು ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಯಿತು. ಮುಂಬೈ ತಂಡದ ಪರ ಸರ್ಫರಾಜ್ ಖಾನ್ 286 ಎಸೆತಗಳಲ್ಲಿ 25 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 222 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮೊದಲ ಇನಿಂಗ್ಸ್ ಆರಂಭಿಸಿದ ರೆಸ್ಟ್ ಆಫ್ ಇಂಡಿಯಾ ತಂಡ ಗುರುವಾರ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್ಗೆ 289 ರನ್ ಕಲೆ ಹಾಕಿದೆ.

ರೆಸ್ಟ್ ಆಫ್ ಇಂಡಿಯಾ ತಂಡದ ಪರ ವೇಗದ ಬೌಲರ್ ಮುಕೇಶ್ ಕುಮಾರ್ ಐದು ವಿಕೆಟ್ ಪಡೆದರು. ಉಳಿದಂತೆ ಯಶ್ ದಯಾಳ್ ಹಾಗೂ ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಕಬಳಿಸಿದರು.
ರೆಸ್ಟ್ ಆಫ್ ಇಂಡಿಯಾ ತಂಡದ ಪರ ಇನಿಂಗ್ಸ್ ಆರಂಭಿಸಿದ ನಾಯಕ ರುತುರಾಜ್ ಗಾಯಕ್ವಾಡ್ (9) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಯಕನ ಜೊತೆಗೂಡಿ ಅಭಿಮನ್ಯು 40 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು.
ಎರಡನೇ ವಿಕೆಟ್ಗೆ ಆರಂಭಿಕ ಅಭಿಮನ್ಯು ಈಶ್ವರನ್ ಹಾಗೂ ಭರವಸೆಯ ಆಟಗಾರ ಸಾಯ್ ಸುದರ್ಶನ್ (32) ಜೊತೆಗೂಡಿ ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಮುಂಬೈ ತಂಡದ ಬೌಲರ್ಗಳು ವಿಫಲರಾದರು. 20 ಓವರ್ಗಳಿಗಿಂತ ಹೆಚ್ಚು ಕ್ರೀಸ್ ಕಾಯ್ದುಕೊಂಡ ಈ ಜೋಡಿ 87ರನ್ ಸೇರಿಸಿತು.

ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ (16) ಜವಾಬ್ದಾರಿ ಮರೆತರು. ನಾಲ್ಕನೇ ವಿಕೆಟ್ಗೆ ಅಭಿಮನ್ಯು ಹಾಗೂ ಇಶಾನ್ ಕಿಶನ್ ಜೊತೆಗೂಡಿ 70 ರನ್ಗಳ ಜೊತೆಯಾಟವನ್ನು ನೀಡಿದರು.
ರೆಸ್ಟ್ ಆಫ್ ಇಂಡಿಯಾ ತಂಡದ ಪರ ಆರಂಭಿಕ ಅಭಿಮನ್ಯು ಈಶ್ವರನ್ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 212 ಎಸೆತಗಳನ್ನು ಎದುರಿಸಿ, 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಾಯದಿಂದ ಅಜೇಯ 151 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದರು. ಈ ಮೂಲಕ ಮುಂದಿನ ಟೆಸ್ಟ್ ಸರಣಿಗೆ ತಮ್ಮನ್ನು ಪರಿಗಣಿಸಿ ಎಂದು ಸೂಚನೆ ನೀಡಿದ್ದಾರೆ.
ರೆಸ್ಟ್ ಆಫ್ ಇಂಡಿಯಾ ತಂಡ ಇನ್ನು 248 ರನ್ಗಳ ಹಿನ್ನಡೆ ಅನುಭವಿಸುತ್ತಿದೆ. ನಾಲ್ಕನೇ ದಿನದಾಟದಲ್ಲಿ ಅಭಿಮನ್ಯು ಹಾಗೂ ಉಳಿದ ಆಟಗಾರರ ಸ್ಥಿರ ಪ್ರದರ್ಶನ ನೀಡುವ ಅವಶ್ಯಕತೆ ಇದೆ.