ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ಗೆ ಭಾರತ ತಂಡವು ತಯಾರಾಗಿದೆ. ಬಹುದಿನಗಳ ಬಳಿಕ ಗಾಯದಿಂದ ಚೇತರಿಸಿಕೊಂಡು ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಎಲ್ ರಾಹುಲ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ರಾಹುಲ್ ಅವರ ಇತ್ತೀಚಿನ ಫಾರ್ಮ್ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ರಾಹುಲ್ 52 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರೆ, ಎರಡನೇ ಇನ್ನಿಂಗ್ಸ್ನಲ್ಲಿ 19 ಎಸೆತಗಳಲ್ಲಿ ಅಜೇಯ 22 ರನ್ ಕಲೆ ಹಾಕಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರು ಫಾರ್ಮ್ಗೆ ಮರಳಲು ಪರದಾಟ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ರಾಹುಲ್ ಪರವಾಗಿ ಮಾತನಾಡಿದ್ದರು. ರಾಹುಲ್ ಪ್ರತಿಭಾವಂತ ಆಟಗಾರ. ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ಏರಿತಗಳಾಗಿವೆ. ಈ ಬಾರಿ ಅವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ ಎಂದಿದ್ದರು. ಆದರೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸಿಕ್ಕ ಅವಕಾಶವನ್ನು ರಾಹುಲ್ ಬಳಸಿಕೊಳ್ಳಲ್ಲಿಲ್ಲ ಎಂಬ ಅಪವಾದ ಅವರ ಮೇಲಿದೆ.
ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕೆಎಲ್ ರಾಹುಲ್ ಬೆಂಬಲಕ್ಕೆ ಟೀಮ್ ಇಂಡಿಯಾ ಆಟಗಾರರು ಸೇರಿದಂತೆ ಕೋಚ್ ಕೂಡ ನಿಂತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಫಾರ್ಮ್ಗೆ ಮರಳುವ ವಿಶ್ವಾಸವನ್ನು ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ವ್ಯಕ್ತಪಡಿಸಿದ್ದಾರೆ. ಎರಡನೇ ಟೆಸ್ಟ್ಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಾಯರ್ ಇತ್ತೀಚಿಗೆ ರಾಹುಲ್ ಎದುರಿಸುತ್ತಿರುವ ಸವಾಲುಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಕಠಿಣ ಸಮಯದಲ್ಲಿ ಆಟಗಾರರನ್ನು ಏಕೆ ಬೆಂಬಲಿಸಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ.
ರಾಹುಲ್ ಎಂತಹ ಆಟಗಾರ ಎಂಬುದು ನಮಗೆಲ್ಲರಿಗೂ ಗೊತ್ತು. ಅವರು ಅಪಾರ ಅನುಭವ ಮತ್ತು ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ ಪ್ರತಿ ಕ್ರಿಕೆಟಿಗರು ಫಾರ್ಮ್ ಸಮಸ್ಯೆ ಎದುರಿಸುತ್ತಿರುವಾಗ ಕೋಚ್ಗಳಾಗಿ ನಮ್ಮ ಪಾತ್ರವು ಮುಖ್ಯವಾಗುತ್ತದೆ. ಹೀಗಾಗಿ ರಾಹುಲ್ ಫಾರ್ಮ್ಗೆ ಮರಳುವುದುಕ್ಕೆ ಸಹಾಯ ಮಾಡಲು ನಾವು ಸಿದ್ಧ ಎಂದು ನಾಯರ್ ಭರವಸೆ ನೀಡಿದ್ದಾರೆ.
ಈ ಹಿಂದೆ ಭಾರತ ತಂಡದ ಖಾಯಂ ಆಟಗಾರರನಾಗಿದ್ದ ಕೆಎಲ್ ರಾಹುಲ್ ಈಗ ತಮ್ಮ ಸ್ಥಾನ ಉಳಿಸಿಕೊಳ್ಳಲು ಅಬ್ಬರಿಸಬೇಕಾಗಿದೆ. ಇದಕ್ಕಾಗಿ ಆಯ್ಕೆಗಾರರು ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ರಾಹುಲ್ ಅವರಿಗೆ ಸತತವಾಗಿ ಅವಕಾಶಗಳನ್ನು ನೀಡುತ್ತಿದ್ದಾರೆ. ಈಗ ರಾಹುಲ್ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ನಲ್ಲಿ ರಾಹುಲ್ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಮೂಲಕ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಕಾನ್ಪುರ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಇಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಇದರ ಸಂಪೂರ್ಣ ಲಾಭವನ್ನು ರಾಹುಲ್ ಪಡೆದು ದೊಡ್ಡ ಇನ್ನಿಂಗ್ಸ್ ಕಟ್ಟಲು ಅವಕಾಶವಿದೆ. ಟೀಮ್ ಇಂಡಿಯಾ ಆಟಗಾರರ ಪೈಕಿ ರಾಹುಲ್ ಸ್ಪಿನ್ನ ಬೌಲಿಂಗ್ಗೆ ಲೀಲಾಜಾಲವಾಗಿ ಆಡುತ್ತಾರೆ. ಹೀಗಾಗಿ ಬಾಂಗ್ಲಾದೇಶ ಸ್ಪಿನ್ ಜಾಲವನ್ನು ರಾಹುಲ್ ಕಾನ್ಪುರದಲ್ಲಿ ಬೇದಿಸಿ ಶತಕ ಬಾರಿಸುವ ನಿರೀಕ್ಷೆಯಿದೆ.