ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ನವದೆಹಲಿ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸೋಮವಾರ ಅಭಿಷೇಕ್ ಶರ್ಮಾ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಿದರೂ ವಿಮಾನ ತಪ್ಪಿಸಿಕೊಂಡಿದ್ದರಿಂದ ಇಂಡಿಗೋ ಏರ್ಲೈನ್ಸ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಭಿಷೇಕ್ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಒಂದು ದಿನದ ರಜೆಯನ್ನು ಹಾಳು ಮಾಡಿದ್ದೀರಾ ಎಂದು ಬೇಸರ ಹೊರಹಾಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಸ್ಥಾನ ಪಡೆದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಜನವರಿ 22 ರಿಂದ ಆರಂಭವಾಗಲಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಇಂಡಿಗೋ ಏರ್ಲೈನ್ಸ್ ಅನ್ನು ಕಟುವಾಗಿ ಟ್ರೀಕಿಸಿದ್ದಾರೆ. ತನ್ನನ್ನು ಅನಗತ್ಯವಾಗಿ ಕೌಂಟರ್ಗಳ ನಡುವೆ ಕಳುಹಿಸಲಾಗಿದೆ. ಇದರಿಂದಾಗಿ ನಾನು ಪ್ರಯಾಣಿಸಬೇಕಿದ್ದ ವಿಮಾನವನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದು ಹೇಳಿರುವ ಅಭಿಷೇಕ್ ಶರ್ಮಾ ಇಂಡಿಗೋ ಏರ್ಲೈನ್ಸ್ನ ಸಿಬ್ಬಂದಿಯೊಬ್ಬರ ಹೆಸರನ್ನು ಹೆಸರಿಸಿ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ನಾನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋದೊಂದಿಗೆ ಕೆಟ್ಟ ಅನುಭವವಾಯಿತು. ಸಿಬ್ಬಂದಿ, ವಿಶೇಷವಾಗಿ ಕೌಂಟರ್ ಮ್ಯಾನೇಜರ್ ಶ್ರೀಮತಿ ಸುಶ್ಮಿತಾ ಮಿತ್ತಲ್ ಅವರ ವರ್ತನೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಾನು ಸರಿಯಾದ ಸಮಯಕ್ಕೆ ಸರಿಯಾದ ಕೌಂಟರ್ಗೆ ತಲುಪಿದೆ. ಆದರೆ ಅವರು ನನ್ನನ್ನು ಅನಗತ್ಯವಾಗಿ ಮತ್ತೊಂದು ಕೌಂಟರ್ಗೆ ಕಳುಹಿಸಿದರು.
ಅಲ್ಲಿಗೆ ಹೋದ ನಂತರ ಚೆಕ್-ಇನ್ ಮುಚ್ಚಲಾಗಿದೆ ಎಂದು ನನಗೆ ತಿಳಿಸಲಾಯಿತು. ಇದರಿಂದಾಗಿ ನಾನು ನನ್ನ ವಿಮಾನವನ್ನು ಕಳೆದುಕೊಂಡೆ. ನನಗೆ ಒಂದು ದಿನ ಮಾತ್ರ ರಜೆ ಇತ್ತು. ಅದು ಈಗ ಸಂಪೂರ್ಣವಾಗಿ ಹಾಳಾಗಿದೆ. ಇದು ಅತ್ಯಂತ ಕೆಟ್ಟ ವಿಮಾನಯಾನ ಅನುಭವವಾಯಿತು ಎಂದು ಅಭಿಷೇಕ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಜನವರಿ 22 ರಂದು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಹೀಗಾಗಿ ಕೋಲ್ಕತ್ತಾದಲ್ಲಿ ಟೀಮ್ ಇಂಡಿಯಾವನ್ನು ಸೇರುವ ಮೊದಲು ಅಭಿಷೇಕ್ ಶರ್ಮಾ ತನ್ನ ರಜಾದಿನವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯಲು ಫ್ಲಾನ್ ಮಾಡಿಕೊಂಡಿದ್ದರು. ಆದರೆ, ವಿಮಾನವನ್ನು ಕಳೆದುಕೊಂಡ ನಂತರ ಅಭಿಷೇಕ್ ಶರ್ಮಾ ಅವರ ಈ ಫ್ಲಾನ್ ವಿಫಲವಾಗಿದೆ.
ಅಭಿಷೇಕ್ ಶರ್ಮಾ ಭಾರತ ಪರ 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 171.81 ಸ್ಟ್ರೈಕ್ ರೇಟ್ನಲ್ಲಿ 256 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು ಒಂದು ಅರ್ಧಶತಕ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ 3 ವಿಕೆಟ್ ಪಡೆದಿದ್ದಾರೆ.