ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಟಿ20 ವಿಶ್ವಕಪ್ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರಿಗೆ ತಂಡದಲ್ಲಿ ಸ್ಥಾನ ನೀಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಆದರೆ ಜಿಂಬಾಬ್ವೆ ವಿರುದ್ಧದ ಸೂಪರ್ 8 ಹಂತದ ಮಹತ್ವದ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಯಿತು. ಈ ಅವಕಾಶವನ್ನು ಅಭಿಷೇಕ್ ಶರ್ಮಾ ಹೇಗೆ ಬಳಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಸಹ ಎದ್ದಿದ್ದವು. ಅಭಿಷೇಕ್ ತಮ್ಮ ಮೇಲೆ ಇದ್ದ ಟೀಕೆಗಳಿಗೆ ಮೈದಾನದಲ್ಲಿ ಉತ್ತರ ನೀಡಿದ್ದಾರೆ.
ಅಭಿಷೇಕ್ ಶರ್ಮಾ ಆಕ್ರಮಣಕಾರಿಯಾಗಿ ಆಡುವ ಆಟಗಾರ. ಇವರು ತಾವು ಎದುರಿಸುವ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಮುಂದಾಗುತ್ತಾರೆ. ಆದರೆ ಜಿಂಬಾಬ್ವೆ ವಿರುದ್ಧ ಇವರು ಕೊಂಚ ವಿಭಿನ್ನ ರೀತಿಯಲ್ಲಿ ಬ್ಯಾಟ್ ಮಾಡಿದರು. ತಮ್ಮ ನೈಜ ಬ್ಯಾಟಿಂಗ್ ಶೈಲಿಗಿಂತ ಭಿನ್ನವಾಗಿ ಅಭಿಷೇಕ್ ಬ್ಯಾಟ್ ಮಾಡಿ ಬೀಗಿದರು. ಈ ಮೂಲಕ ಅಭಿಷೇಕ್ ಶರ್ಮಾ ಒತ್ತಡದ ಸನ್ನಿವೇಶದಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವುದಾಗಿ ತಿಳಿಸಿದರು.

ಅಭಿಷೇಕ್ ಶರ್ಮಾ ಲಯಕ್ಕೆ ಮರಳಲು ಸೂಪರ್ 8 ಹಂತದ ಮಹತ್ವದ ಪಂದ್ಯವನ್ನು ಆಯ್ಕೆ ಮಾಡಿಕೊಂಡಂತೆ ಕಂಡು ಬಂದಿತು. ಇವರು ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದರು. ಚೆನ್ನೈನಲ್ಲಿನ ಅಭಿಮಾನಿಗಳು ಅಭಿಷೇಕ್ ಶರ್ಮಾ ಬ್ಯಾಟಿಂಗ್ ನೋಡಲೆಂದೆ ಅಂಗಳಕ್ಕೆ ಬಂದಿದ್ದರು. ಅವರಿಗೆ ಅಭಿಷೇಕ್ ತಮ್ಮ ಸ್ಥಿರ ಬ್ಯಾಟಿಂಗ್ನಿಂದ ಮನೋರಂಜಿಸಿದರು. ಒಮ್ಮೆ ಅಭಿಷೇಕ್ ಸೆಟ್ಲ್ ಆದ ಬಳಿಕ ತಮ್ಮ ನೈಜ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಬೌಂಡರಿ ಸಿಕ್ಸರ್ಗಳನ್ನು ಬಾರಿಸಿದರು. ಇವರು 30 ಎಸೆತಗಳಲ್ಲಿ 55 ರನ್ ಬಾರಿಸಿ ಔಟ್ ಆದರು.
ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ದಿಗ್ಗಜ ಸುನಿಲ್ ಗವಾಸ್ಕರ್, ಅಭಿಷೇಕ್ ಶರ್ಮಾ ಮೈದಾನಕ್ಕೆ ಇಳಿಯುವಾಗ ಕೊಂಚ ಆತ್ಮವಿಶ್ವಾಸ ಕಡಿಮೆ ಕಂಡಿತು. ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ಸ್ಪಷ್ಟವಾಗಿ ಕಂಡಿತು. ಹೀಗಾಗಿ ಅಭಿಷೇಕ್ ಶರ್ಮಾ ಸಮಾಧಾನದಿಂದ ಬ್ಯಾಟ್ ಮಾಡಿದರು ಎಂದು ಹೇಳಿದ್ದಾರೆ.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಬೌಲರ್ ಚೆಂಡನ್ನು ಕೈಯಿಂದ ಬಿಡುವವರೆಗೂ ಅವರ ಗಮನಿಸುತ್ತಿದ್ದರು. ಆ ಬಳಿಕ ತಮ್ಮ ಫುಟ್ ವರ್ಕ್ ಬಳಿಸಿ ಆಟವನ್ನು ಆಡಿದರು. ಅಭಿಷೇಕ್ ಶರ್ಮಾ ಅವರು ತಮ್ಮ ಬ್ಯಾಟ್ ಸ್ವಿಂಗ್ ಮೇಲೆ ಬೇಗನೆ ಕಂಟ್ರೋಲ್ ಪಡೆದರು. ಬ್ಯಾಟ್ ಸ್ಪೀಡ್ ಕಂಟ್ರೋಲ್ ಮಾಡಿ, ಅಮೋಘ ಬ್ಯಾಟಿಂಗ್ ನಡೆಸಿದರು ಎಂದು ಅಭಿಷೇಕ್ ಶರ್ಮಾ ಬೆನ್ನುತಟ್ಟಿದರು.
ಟೀಮ್ ಇಂಡಿಯಾ ಸೂಪರ್ 8 ಹಂತದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ ಸೇರಿಸಿತು. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅರ್ಧಶತಕ ಬಾರಿಸಿದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 23 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 50 ರನ್ ಸಿಡಿಸಿದರು. ತಿಲಕ್ ವರ್ಮಾ ಅಜೇಯ 44 ರನ್ ಬಾರಿಸಿದರು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡದ ಪರ ಆರಂಭಿಕ ಬ್ರಿಯಾನ್ ಬೆನೆಟ್ ಏಕಾಂಗಿ ಹೋರಾಟ ನಡೆಸಿದರು. ಇವರು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಸೇರಿಸಿ ಸೋಲು ಕಂಡಿತು. ಈ ಜಯದ ಮೂಲಕ ಭಾರತದ ಸೆಮಿಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿದೆ.