ಜುಲೈ 19 ಶುಕ್ರವಾರ, ಶ್ರೀಲಂಕಾ ಪ್ರವಾಸಕ್ಕೆ ಏಕದಿನ ಮತ್ತು ಟಿ20 ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಗೌತಮ್ ಗಂಭೀರ್ ಮೇಲ್ವಿಚಾರಣೆಯಲ್ಲಿ ಆಯ್ಕೆಯಾದ ಆಟಗಾರರು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಟೀಮ್ ಇಂಡಿಯಾ ಘೋಷಿಸಿದ ಬಳಿಕ ಹಲವಾರು ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸಿವೆ. ಜಿಂಬಾಬ್ವೆ ಸರಣಿಯಲ್ಲಿ ಯುವ ಬ್ಯಾಟರ್ಸ್ ಅಭಿಷೇಕ್ ಶರ್ಮಾ ಮತ್ತು ಋತುರಾಜ್ ಗಾಯಕ್ವಾಡ್ ಅಮೋಘ ಪ್ರದರ್ಶನ ನೀಡಿದ್ದರೂ, ಶ್ರೀಲಂಕಾ ಪ್ರವಾಸದ ಭಾರತ ತಂಡಕ್ಕೆ ಏಕೆ ಆಯ್ಕೆ ಮಾಡಿಲ್ಲ ಎಂಬ ಚರ್ಚೆ ಆರಂಭವಾಗಿವೆ.

ಐಪಿಎಲ್ 2024ರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಭಿಷೇಕ್ ಶರ್ಮಾ, ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಕ್ಕೆ ಚೊಚ್ಚಲ ಟಿ20 ಪಂದ್ಯವನ್ನಾಡಿದ್ದಾರೆ.
ಮೊದಲ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗದಿದ್ದರೂ ಎರಡನೇ ಟಿ20 ಯಲ್ಲಿ ಅಭಿಷೇಕ್ ಭರ್ಜರಿ ಶತಕ ಸಿಡಿಸಿದ್ದರು. ಈ ಮೂಲಕ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭಿಕರಾಗಿ ತಮ್ಮ ಛಾಪು ಮೂಡಿಸಿದ್ದಾರೆ.
ಆದರೆ ಶ್ರೀಲಂಕಾ ಪ್ರವಾಸದಲ್ಲಿ ಯುವ ಸ್ಪೋಟಕ ಬ್ಯಾಟರ್ನನ್ನು ಕಡೆಗಣಿಸಲಾಗಿದೆ. ಟಿ20ಯಲ್ಲಿ 45 ಎಸೆತಗಳಲ್ಲಿ ಶತಕ ಗಳಿಸಿದರೂ
ಕೂಡ ಹೊಸ ಹೆಡ್ ಕೋಚ್ ಗಂಭೀರ್ ಗಮನ ಸೆಳೆಯಲಿಲ್ಲ. ಹೀಗಾಗಿ ಶ್ರೀಲಂಕಾ ಪ್ರವಾಸದ ಭಾರತ ತಂಡದಿಂದ ಕೈ ಬಿಡಲಾಗಿದೆ.
ಶ್ರೀಲಂಕಾ ಪ್ರವಾಸದಲ್ಲಿ ಅಭಿಷೇಕ್ ಶರ್ಮಾ ಹೊರತುಪಡಿಸಿ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್ಗೂ ಅವಕಾಶ ಸಿಕ್ಕಿಲ್ಲ. ಗಾಯಕ್ವಾಡ್ 3 ಇನ್ನಿಂಗ್ಸ್ಗಳಲ್ಲಿ 149 ರನ್ ಗಳಿಸಿದರು. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಗಾಯಕ್ವಾಡ್ 49, 77*, 7, 0 ರನ್ಗಳ ಇನ್ನಿಂಗ್ಸ್ಗಳನ್ನು ಆಡಿದರು.
ಮತ್ತೊಂದು ಅಚ್ಚರಿ ವಿಷಯವೇನೆಂದರೆ ಈ ಇಬ್ಬರು ಆಟಗಾರರನ್ನು ಕಡೆಗಣಿಸಿ ಜಿಂಬಾಬ್ವೆ ಸರಣಿಯಲ್ಲಿ ಫ್ಲಾಪ್ ಆದ ರಿಯಾನ್ ಪರಾಗ್ ಗೆ ಅವಕಾಶ ನೀಡಲಾಗಿದೆ. ಪರಾಗ್ ಅವರನ್ನು ಎರಡೂ ಸರಣಿಗಳ ತಂಡದಲ್ಲಿ ಸೇರಿಸಲಾಗಿದೆ. ಆದರೆ ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ ಪರಾಗ್ 3 ಪಂದ್ಯಗಳಲ್ಲಿ ಕೇವಲ 24 ರನ್ ಗಳಿಸಿದ್ದರು.