ದುಬೈ: ಭರವಸೆಯ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬಾರಿಸಿದ ಅರ್ಧಶತಕ ಹಾಗೂ ಕುಲ್ದೀಪ್ ಯಾದವ್ ಅವರ ಬಿಗುವಿನ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 41 ರನ್ಗಳಿಂದ ಮಣಿಸಿ ಟೂರ್ನಿಯ ಫೈನಲ್ಗೆ ಅರ್ಹತೆ ಪಡೆದಿದೆ. ಬಾಂಗ್ಲಾದೇಶ ತಂಡಕ್ಕೆ ಇನ್ನೊಂದು ಅವಕಾಶ ಇದ್ದು, ಗುರುವಾರ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿರಲಿದೆ.
ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿತು. ಒಂದು ಹಂತದಲ್ಲಿ ಬಾಂಗ್ಲಾದೇಶ ಸುಲಭವಾಗಿ ಪಂದ್ಯವನ್ನು ಗೆದ್ದು ಬಿಡಬಹುದು ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಭಾರತ ಬೌಲರ್ಗಳ ಬಿಗುವಿನ ದಾಳಿಗೆ ಬಾಂಗ್ಲಾ ಧರಾಶಾಹಿ ಆಗಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 19.3 ಓವರ್ಗಳಲ್ಲಿ 127 ರನ್ ಕಲೆ ಹಾಕಿ ಸರ್ವ ಪತನ ಕಂಡಿತು. ಸೂಪರ್ 4 ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಸುಲಭವಾಗಿ ಫೈನಲ್ ಪ್ರವೇಶಿಸಿದೆ.

ಬಾಂಗ್ಲಾದೇಶದ ಆರಂಭ ಕಳಪೆಯಾಗಿತ್ತು. ಆರಂಭಿಕ ತಾಂಜಿದ್ ಹಸನ್ (1) ಬಿಗ್ ಸ್ಕೋರ್ ಬಾರಿಸದೇ ಔಟ್ ಆದರು. ಎರಡನೇ ವಿಕೆಟ್ಗೆ ಸೈಫ್ ಹಸನ್ ಹಾಗೂ ಪರ್ವೇಜ್ ಹೊಸೇನ್ ಎಮನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 42 ರನ್ ಸೇರಿಸಿ ಟೀಮ್ ಇಂಡಿಯಾ ಬೌಲರ್ಗಳನ್ನು ಕಾಡಿತು. ಪರ್ವೇಜ್ ಹೊಸೇನ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 21 ರನ್ ಬಾರಿಸಿ ಔಟ್ ಆದರು. ಇವರು ಔಟ್ ಆದ ಬಳಿಕ ಬಂದ ಬಾಂಗ್ಲಾದೇಶದ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಪರಿಣಾಮ ಸಿಂಗಲ್ ಡಿಜಿಟನ್ನಲ್ಲಿ ಆಟ ಮುಗಿಸಿದರು.
ಆರಂಭಿಕ ಆಟಗಾರ ಸೈಫ್ ಹಸನ್ 51 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 69 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ತಮ್ಮ ಟಿ20 ಕ್ರಿಕೆಟ್ನ ವೃತ್ತಿ ಜೀವನದಲ್ಲಿ 3ನೇ ಅರ್ಧಶತಕ ಬಾರಿಸಿದರು.
ಟೀಮ್ ಇಂಡಿಯಾದ ಪರ ಕುಲ್ದೀಪ್ ಯಾದವ್ 18 ರನ್ ನೀಡಿ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಬಳಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಶುಭಮನ್ ಗಿಲ್ (29) ಮತ್ತು ಅಭಿಷೇಕ್ ಶರ್ಮಾ ಜೋಡಿ ಮೊದಲ ವಿಕೆಟ್ಗೆ 6.2 ಓವರ್ಗಳಲ್ಲಿ 77 ರನ್ ಸೇರಿಸಿತು. ನಂತರ ಬಂದ ಶಿವಂ ದುಬೆ (2 ರನ್), ನಾಯಕ ಸೂರ್ಯಕುಮಾರ್ ಯಾದವ್ (5 ರನ್) ಮತ್ತು ತಿಲಕ್ ವರ್ಮಾ (5 ರನ್) ಬಂದು ಹೋಗುವ ಸಂಪ್ರದಾಯ ಮುಗಿಸಿದರು.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 75 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 38 ರನ್ ಸಿಡಿಸಿ ಮಿಂಚಿದರು.