ಕೊಲಂಬೋ, ಸೆ.20: ಶ್ರೀಲಂಕಾದ ಏಕದಿನ ಕ್ರಿಕೆಟ್ ತಂಡದ ವೇಗಿ ನುವಾನ್ ಕುಲಶೇಖರ ಅವರು ಸ್ವಲ್ಪದ್ದರಲ್ಲೇ ಜೈಲುಶಿಕ್ಷೆಯಿಂದ ಪಾರಾಗಿದ್ದಾರೆ. ಅಪಘಾತ ಪ್ರಕರಣವೊಂದರಲ್ಲಿ ಸಿಲುಕಿದ್ದ ನುವಾನ್ ಅವರು ತಪ್ಪಿತಸ್ಥ ಎನ್ನಲು ಸರಿಯಾದ ಸಾಕ್ಷಿ ಸಿಗದ ಕಾರಣ, ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿರುವ ನುವಾನ್ ಕುಲಶೇಖರ ಅವರು ಚಲಿಸುತ್ತಿದ್ದ ಕಾರಿಗೆ 28 ವರ್ಷ ವಯಸ್ಸಿನ ಬೈಕ್ ಸವಾರನೊಬ್ಬ ಬಡಿದಿತ್ತು. ತೀವ್ರ ರಕ್ತಸ್ರಾವದಿಂದ ಬೈಕ್ ಸವಾರ ಸಾವನ್ನಪ್ಪಿದ್ದ.
ಕೊಲಂಬೋದಿಂದ ಕ್ಯಾಂಡಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು. ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದು ಬೈಕ್ ಸವಾರ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾನೆ. ಕುಲಶೇಖರ ಅವರ ಕಾರು ವೇಗವಾಗಿ ಅಥವಾ ಅಡ್ಡಾದಿಡ್ಡಿ ಚಲಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಅಲ್ಲದೆ, ಮುಂದಿದ್ದ ಬಸ್ ಓವರ್ ಟೇಕ್ ಮಾಡಿಕೊಂಡು ಬಂದ ಬೈಕ್ ಸವಾರ ಎದುರಿಗೆ ಬರುತ್ತಿದ್ದ ಕುಲಶೇಖರ ಅವರ ಕಾರಿಗೆ ಗುದ್ದಿದ್ದಾನೆ ಎಂಬುದು ವಿಚಾರಣೆ ವೇಳೆ ಸಾಬೀತಾಗಿದೆ.
ಹೀಗಾಗಿ, 34 ವರ್ಷ ವಯಸ್ಸಿನ ನುವಾನ್ ಕುಲಶೇಖರ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದು ಮನೆಗೆ ತೆರಳಿದ್ದಾರೆ.
ಕುಲಶೇಖರ ಅವರು ಶ್ರೀಲಂಕಾ ಪರ 21 ಟೆಸ್ಟ್ ಪಂದ್ಯಗಳನ್ನಾಡಿ 48 ವಿಕೆಟ್ ಪಡೆದುಕೊಂಡಿದ್ದಾರೆ. 173 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಾಗೂ 50 ಟಿ20ಐ ಪಂದ್ಯಗಳನ್ನಾಡಿದ್ದಾರೆ.(ಏಜೆನ್ಸೀಸ್)