ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿರುವ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ತಾವು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ತಯಾರಿರುವುದಾಗಿ ಸಾರಿ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಏಕದಿನ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯವನ್ನು 5 ವಿಕೆಟ್ಗಳಿಂದ ಸೋಲಿಸಿತು. ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸುಮಾರು 20 ತಿಂಗಳ ನಂತರ ಏಕದಿನ ಸ್ವರೂಪಕ್ಕೆ ಮರಳಿದ್ದಾರೆ.

ಅಶ್ವಿನ್ ಅವರು ಆಸ್ಟ್ರೇಲಿಯಾದ ಮಾರ್ನಸ್ ಲಂಬುಶೇನ್ ಅವರನ್ನು ಔಟ್ ಮಾಡಿದರು. ಮತ್ತು 611 ದಿನಗಳ ನಂತರ ಏಕದಿನ ಸ್ವರೂಪದಲ್ಲಿ ವಿಕೆಟ್ ಪಡೆದರು. ಅಶ್ವಿನ್ ಎಸೆತದಲ್ಲಿ ವಿಕೆಟ್ ಕೀಪರ್ ಕೆ.ಎಲ್. ರಾಹುಲ್, ಮಾರ್ನಸ್ ಲಂಬುಶೇನ್ ಅವರನ್ನು ಸ್ಟಂಪ್ ಮಾಡಿದರು. ಆದರೆ ಮಾರ್ನಸ್ ವಿಚಿತ್ರ ರೀತಿಯಲ್ಲಿ ಔಟಾದ ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ, ಮಾರ್ನಸ್ ಲಂಬುಶೇನ್ ಅವರನ್ನು ವಜಾಗೊಳಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಮೊದಲ ಪಂದ್ಯದಲ್ಲಿ ಅಶ್ವಿನ್ 10 ಓವರ್ ಬೌಲ್ ಮಾಡಿದ್ದರು. ರವಿಚಂದ್ರನ್ ಅಶ್ವಿನ್ 10 ಓವರ್ ಗಳಲ್ಲಿ 47 ರನ್ ನೀಡಿ 1 ವಿಕೆಟ್ ಪಡೆದರು. ಭಾರತ ತಂಡದ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡ ನಂತರ, ಅಶ್ವಿನ್ ಗೆ ಟೀಮ್ ಇಂಡಿಯಾದ ಬುಲಾವ್ ಬಂದಿದೆ. ಅಶ್ವಿನ್ ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ವಿಶ್ವಕಪ್ ತಂಡಕ್ಕೆ ಬಾಗಿಲು ತೆರೆಯಬಹುದು ಎಂದು ನಂಬಲಾಗಿದೆ, ಅಶ್ವಿನ್ ಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ
ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ 277 ರನ್ ಗಳ ಗುರಿ ಇತ್ತು. ಭಾರತ ತಂಡ 48.4 ಓವರ್ಗಳಲ್ಲಿ 5 ವಿಕೆಟ್ಗೆ 281 ರನ್ ಗಳಿಸಿ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಮಾಡಲು ನಿರ್ಧರಿಸಿದ್ದರು.
ಮೊದಲು ಬ್ಯಾಟ್ ಮಾಡಲು ಬಂದ ಆಸ್ಟ್ರೇಲಿಯಾ ತಂಡ 50 ಓವರ್ ಗಳಲ್ಲಿ 277 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಶಮಿ ಗರಿಷ್ಠ 5 ವಿಕೆಟ್ ಪಡೆದರು. ಇನ್ನು ಗುರಿಯನ್ನು ಬೆನ್ನಟ್ಟಿದ ಭಾರತದ ತಂಡದ ಆರಂಭಿಕರಾದ ಶುಭಮನ್ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್ ಸೊಗಸಾದ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಹಾಗೂ ಸೂರ್ಯಕುಮಾರ್
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಸ್ಥಿರ ಬ್ಯಾಟಿಂಗ್ ನಡೆಸಿ, ವಿಶ್ವಕಪ್ ತಂಡದಲ್ಲಿ ತಮಗೆ ಸ್ಥಾನ ನೀಡಿದನ್ನು ಸಮರ್ಥಿಸಿಕೊಂಡರು.