ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ಸರಣಿಯಲ್ಲಿ ಭಾಗಿಯಾಗಿರುವ ಶ್ರೀಲಂಕಾ ತಂಡ ಬೇಡದ ಕಾರಣಕ್ಕೆ ಸುದ್ಧಿಯಾಗಿದೆ. ಇಂಗ್ಲೆಂಡ್ನಲ್ಲಿ ಲಂಕಾ ಆಟಗಾರರು ಬಯೋಬಬಲ್ ಉಲ್ಲಂಘನೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗ ತನಿಖೆಯನ್ನು ಕೂಡ ಆರಂಭಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ನೈಟ್ಔಟ್ಗೆ ತೆರಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಲಂಕಾ ಆಟಗಾರರು ತನಿಖೆಗೆ ಒಳಗಾಗಲಿದ್ದಾರೆ. ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್ ಡಿಕ್ವೆಲ್ಲಾ ಹಾಗೂ ಕುಸಾಲ್ ಮೆಂಡಿಸ್ ಅವರು ಬಯೋಬಬಲ್ ಉಲ್ಲಂಘಿಸಿರುವ ಆಟಗಾರರು ಎನ್ನಲಾಗಿದೆ.
ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಶ್ರೀಲಂಕಾಕ್ಕೆ ಪ್ರಯಾಣ
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೂರನೇ ಪಂದ್ಯವನ್ನೂ ಕೂಡ ಭಾನುವಾರ ಸೋತಿತ್ತು. ಇಂಗ್ಲೆಂಡ್ ತಂಡ 89 ರನ್ಗಳ ಅಂತರದಿಂದ ಗೆದ್ದ ಈ ಪಂದ್ಯದಲ್ಲಿ ಶ್ರೀಲಂಕಾದ ನಿರೋಶನ್ ಡಿಕ್ವೆಲ್ಲಾ ಹಾಗೂ ಕುಸಾಲ್ ಮೆಂಡಿಸ್ ಕೂಡ ಆಡಿದ್ದರು. ಈ ಸೋಲಿನ ಬಳಿಕ ಈ ಬಯೋಬಬಲ್ ಉಲ್ಲಂಘನೆಯಾಗಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ನಂತರ ಶ್ರೀಕಂಕಾ ಕ್ರಿಕೆಟ್ನ ಮುಖ್ಯಸ್ಥ ಶಮ್ಮಿ ಸಿಲ್ವಾ ಪ್ರತಿಕ್ರಿಯಿಸಿದ್ದು ತನಿಖೆ ನಡೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಆಟಗಾರರು ಬಯೋಬಬಲ್ಅನ್ನು ಉಲ್ಲಂಘಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನಿಖೆಯಲ್ಲಿ ಪತ್ತೆಹಚ್ಚಲಿದೆ.
ಈ ಆಟಗಾರರು ಬಯೋಬಬಲ್ ಉಲ್ಲಂಘಿಸಿರುವುದು ಸಾಬೀತಾದರೆ ಎರಡು ವಾರಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗುವ ಸಾಧ್ಯತೆಯಿದೆ. ಈಗಾಗಲೇ ಕಳಪೆ ಪ್ರದರ್ಶನದ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿರುವ ಶ್ರೀಲಂಕಾ ತಂಡಕ್ಕೆ ಈ ಬೆಳವಣಿಗೆ ಮತ್ತಷ್ಟು ಹಿನ್ನಡೆಯುಂಟು ಮಾಡುವ ಸಾಧ್ಯತೆಯಿದೆ.