
ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ ಶ್ರೀಲಂಕಾಗೆ ಪ್ರವಾಸವನ್ನು ಕೈಗೊಂಡಿದ್ದು ಶುಕ್ರವಾರದಿಂದ ಹೊರಾಂಗಣ ತರಬೇತಿಯನ್ನು ಆರಂಭಿಸಿದೆ. ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತೀಯ ಆಟಗಾರರು ತಮ್ಮ ಅಭ್ಯಾಸವನ್ನು ಆರಂಭಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಇಂದು ಬಿಸಿಸಿಐ ತನ್ನ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ದ್ರಾವಿಡ್ ಮಾರ್ಗದರ್ಶನವನ್ನು ನೀಡುತ್ತಿರುವ ಫೋಟೋಗಳನ್ನು ಕಂಡ ನೆಟ್ಟಿಗರು ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸುತ್ತಿದೆ.
ಕಳೆದ ವಾರ ಭಾರತದಲ್ಲಿ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಿದ ಬಳಿಕ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾಗೆ ತೆರಳಿತ್ತು. ಶ್ರೀಲಂಕಾದಲ್ಲಿ ಕಡ್ಡಾಯ ಅವಧಿಯ ಕ್ವಾರಂಟೈನ್ಅನ್ನು ಭಾರತೀಯ ಕ್ರಿಕೆಟ್ ತಂಡ ಪೂರೈಸಿದ್ದು ಆಟಗಾರರು ಹೊರಾಂಗಣ ಅಭ್ಯಾಸವನ್ನು ಆರಂಭಿಸಿದ್ದಾರೆ.
ಜುಲೈ 13ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಟಿ20 ಸರಣಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಭಾಗಿಯಾಗಲಿದೆ. ಈ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಮಾರ್ಗದರ್ಶನವನ್ನು ನೀಡಲಿದ್ದಾರೆ.
ಭಾರತದ ಖಾಯಂ ಕೋಚ್ ಆಗಿರುವ ರವಿ ಶಾಸ್ತ್ರಿ ಇಂಗ್ಲೆಂಡ್ಗೆ ತೆರಳಿರುವ ಭಾರತೀಯ ಟೆಸ್ಟ್ ತಂಡಕ್ಕೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಈ ಸರಣಿ ಆಗಸ್ಟ್ ನಾಲ್ಕರಿಂದ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಬಿಸಿಸಿಐ ಎರಡು ವಿಭಿನ್ನ ದೇಶಗಳಿಗೆ ವಿಭಿನ್ನ ತಂಡಗಳನ್ನು ಕಳುಹಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಟೆಸ್ಟ್ ತಂಡದ ಖಾಯಂ ಸದಸ್ಯರಾಗಿರುವ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಸಹಿತ ಕೆಎಲ್ ರಾಹುಲ್ ಮಯಾಂಕ್ ಅಗರ್ವಾಲ್ ಶ್ರೀಲಂಕಾಗೆ ತೆರಳುವ ಈ ತಂಡದ ಭಾಗವಾಗಿಲ್ಲ. ಹೀಗಾಗಿ ಅನುಭವಿ ಶಿಖರ್ ಧವನ್ ಭಾರತೀಯ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಆರು ಯುವ ಆಟಗಾರರು ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಈಗಾಗಲೇ ಭಾರತ ಎ ಹಾಗೂ ಅಂಡರ್ 19 ತಂಡಗಳಿಗೆ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ ಅನುಭವವನ್ನು ಹೊಂದಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲಿರುವ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಲಂಕಾ ಸರಣಿಗೆ ಕೋಚ್ ಹುದ್ದೆಯನ್ನು ನಿರ್ವಹಿಸಲಿದ್ದಾರೆ.