ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಟಿಯಾದ ಪ್ಲೇಯಿಂಗ್ ಇಲೆವೆನ್ನಿಂದ ವಿಶ್ವದ ನಂ.1 ಬೌಲರ್ ಆರ್. ಅಶ್ವಿನ್ ಹೊರಬಿದ್ದಿದ್ದಾರೆ. ಟಾಸ್ ವೇಳೆ ಮೋಡ ಕವಿದ ವಾತಾವರಣವಿದ್ದ ಕಾರಣ ಹಾಗೂ ಪಿಚ್ ಹುಲ್ಲಿನಿಂದ ಕೂಡಿದ್ದ ಕಾರಣ ವೇಗಿಗಳಿಗೆ ನೆರವು ದೊರೆಯಬಹುದು ಎಂಬ ಲೆಕ್ಕಾಚಾರದಲ್ಲಿ ಭಾರತ ತಂಡ ಆಡುವ ಹನ್ನೊಂದರ ಬಳಗದಲ್ಲಿ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿತು.
ಈ ಕಾರಣದಿಂದಾಗಿ ರವಿಚಂದ್ರನ್ ಅಶ್ವಿನ್ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಅಶ್ವಿನ್ಗಿಂತ ಉತ್ತಮ ಬ್ಯಾಟರ್ ಮತ್ತು ತಂಡದಲ್ಲಿ ಏಕೈಕ ಎಡಗೈ ಬ್ಯಾಟರ್ ಎಂಬ ಕಾರಣಕ್ಕೆ ಜಡೇಜಾ ಆಡುವ ಬಳಗದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡರು. ಹೀಗಾಗಿ ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಅಶ್ವಿನ್ ಬೆಂಚ್ ಕಾಯುವಂತಾ ಸ್ಥಿತಿ ಉಂಟಾಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲ ಸೆಶನ್ನಲ್ಲಿ ಭಾರತದ ಬೌಲಿಂಗ್ ವಿಭಾಗ ಸಮಬಲದ ಹೋರಾಟ ಪ್ರದರ್ಶಿಸಿದರೂ ಎರಡನೇ ಸೆಶನ್ನಲ್ಲಿ ಕೇವಲ ಒಂದು ವಿಕೆಟ್ ಮಾತ್ರವೇ ಪಡೆದು ಹಿನ್ನಡೆಯನ್ನು ಅನುಭವಿಸಿತು. ಟೀಮ್ ಇಂಡಿಯಾದ ಬೌಲರ್ಗಳು ವಿಕೆಟ್ ಪಡೆಯಲು ಆಸಿಸ್ ದಾಂಡಿಗರನ್ನು ಹಿಮ್ಮೆಟ್ಟಿಸಲು ವಿಫಲವಾದರು. ಈ ಸಂದರ್ಭದಲ್ಲಿ ಆರ್ ಅಶ್ವಿನ್ ಆಡುವ ಬಳಗದಲ್ಲಿ ಅವಕಾಶ ದೊರೆಯದಿದ್ದರೂ ವಾಟರ್ಬಾಯ್ ಆಗಿ ಬಂದು ನಾಯಕ ರೋಹಿತ್ ಶರ್ಮಾಗೆ ಕೆಲ ಸಲಹೆಗಳನ್ನು ನೀಡಿದ್ದಾರೆ.
ಆರ್ ಅಶ್ವಿನ್ ಕ್ರಿಕೆಟ್ ಕ್ರಿಕೆಟ್ ತಂತ್ರಗಾರಿಕೆಗೆ ಹೆಸರುವಾಸಿ. ಎದುರಾಳಿಯ ವಿರುದ್ಧ ಯಾವ ರೀತಿಯ ರಣತಂತ್ರದಿಂದ ಒತ್ತಡ ಹೇರಬಹುದು ಎಂಬುದರಲ್ಲಿ ಅಶ್ವಿನ್ ನಿಷ್ಣಾತರು. ಆಸ್ಟ್ರೇಲಿಯಾ ತಂಡ ವಿಕೆಟ್ಗಳನ್ನು ನೀಡದೆ ಭಾರತದ ಬೌಲಿಂಗ್ ವಿಭಾಗದ ಮೇಲೆ ಒತ್ತಡ ಹೇರಲು ಆರಂಭಿಸಿದಾಗ ಅಶ್ವಿನ್ ನಾಯಕನಿಗೆ ಸಲಹೆ ನೀಡಿರುವುದು ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್