ಗಾಲೆ, ಜುಲೈ 30: ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಸುಲಭ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.
ಶನಿವಾರ(ಜುಲೈ 29) ದಂದು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಟೀಂ ಇಂಡಿಯಾ ಪಡೆದುಕೊಂಡಿದೆ. ಗಾಲೆ ಟೆಸ್ಟ್ ಪಂದ್ಯದ ಭಾರಿ ಅಂತರ (304ರನ್) ಜಯ 'ತುಂಬಾ ವಿಶೇಷ' ವಾದದ್ದು, ಪಿಚ್ ನಿಂದ ಬೌಲರ್ ಗಳಿಗೆ ವಿಶೇಷ ಲಾಭ ಸಿಕ್ಕಿರಲಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಅವರು ಪಂದ್ಯದ ನಂತರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಟೀಂ ಇಂಡಿಯಾದ ಆರಂಭಿಕ ಆಟಗಾರ ಕರ್ನಾಟಕದ ಕೆಎಲ್ ರಾಹುಲ್ ಅವರು ಗಾಯದ ಸಮಸ್ಯೆ, ಜ್ವರದಿಂದ ಗುಣಮುಖರಾಗಿದ್ದು, ತಂಡವನ್ನು ಸೇರಿಕೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯ ನಾಲ್ಕೇ ದಿನಕ್ಕೆ ಮುಗಿದಿದ್ದರಿಂದ ಹೆಚ್ಚುವರಿ ಸಮಯ ಸಿಕ್ಕಿದೆ.
ಎರಡನೇ ಟೆಸ್ಟ್ ಪಂದ್ಯವನ್ನಾಡುವ ಉತ್ಸಾಹದಲ್ಲಿರುವ ಕೆಎಲ್ ರಾಹುಲ್ ಅವರು ಅಭಿನವ್ ಮುಕುಂದ್ ಅವರ ಬದಲಿಗೆ ತಂಡವನ್ನು ಸೇರುವ ಸಾಧ್ಯತೆ ಹೆಚ್ಚಿದೆ. ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮುಕುಂದ್ ಉತ್ತಮವಾಗಿ ಆಡಿ 81ರನ್ ಗಳಿಸಿದ್ದರು.