ನವದೆಹಲಿ, ಡಿ. 6: 'ಕೈಲಾಗದವ ಮೈ ಪರಚಿಕೊಂಡ' ಎಂಬ ಗಾದೆ ಈಗ ವೀರೇಂದ್ರ ಸೆಹ್ವಾಗ್ ಪಾಲಿಗೆ ನಿಜವಾಗಿದೆ. ಅಭ್ಯಾಸದ ವೇಳೆ ಕಂಡಕಂಡಲ್ಲಿಗೆ ಚೆಂಡು ಹೊಡೆದು ವಿಶ್ವಕಪ್ ಗೆ ಆಯ್ಕೆಯಾಗದಿರುವ ಬಗೆಗಿನ ಸಿಟ್ಟು ಹೊರಹಾಕಿದ್ದಾರೆ. ಅಲ್ಲದೇ ಸ್ಥಳೀಯ ಕ್ಲಬ್ನ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.
ಏಕದಿನ ವಿಶ್ವಕಪ್ ಸಂಭಾವ್ಯರ ಪಟ್ಟಿಗೆ ಆಯ್ಕೆಯಾಗದ್ದಕ್ಕೆ ಹಿರಿಯ ಆಟಗಾರರ ಅಂತರಂಗದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ರಣಜಿ ಪಂದ್ಯದ ಅಭ್ಯಾಸದ ವೇಳೆ ವೀರೇಂದ್ರ ಸೆಹ್ವಾಗ್ ವರ್ತನೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಬಹಿರಂಗವಾಗಿ ಅಸಮಾಧಾನ ಹೊರಹಾಕಲು ಸಾಧ್ಯವಾಗದೇ ಸೆಹ್ವಾಗ್ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.[ವಿಶ್ವಕಪ್ ಟೂರ್ನಿಗೆ 30 ಮಂದಿ ಟೀಂ ಇಂಡಿಯಾ ಪ್ರಕಟ]

ಅಭ್ಯಾಸ ನಡೆಸುತ್ತಿದ್ದ ಸೆಹವಾಗ್, ನೆಟ್ನಲ್ಲಿ ಪ್ರತಿಯೊಂದು ಚೆಂಡನ್ನು ಸಿಕ್ಸರ್ಗೆ ಅಟ್ಟಲು ಯತ್ನಿಸಿದರು. ಬ್ಯಾಟ್ ಗೆ ತಾಗಿದ ಕೆಲವು ನಾಪತ್ತೆಯಾದವು. ಅಬ್ಬರದಲ್ಲಿ ಹೊಡೆದ ಚೆಂಡೊಂದು ಸ್ಥಳೀಯ ಕ್ಲಬ್ನ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿತು.[ಎಂಎಸ್ ಧೋನಿ ಹೊಸ ಕೇಶ ವಿನ್ಯಾಸದ ಗುಟ್ಟೇನು?]
ಭಾನುವಾರ ನಡೆಯಲಿರುವ ರಣಜಿ ಪಂದ್ಯದ ಪೂರ್ವಭಾವಿಯಾಗಿ ದೆಹಲಿ ತಂಡದಲ್ಲಿರುವ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅಭ್ಯಾಸ ನಡೆಸಿದರು. ಉಳಿದ ಎಲ್ಲ ಆಟಗಾರರು ಬಿಳಿ ಉಡುಪಿನಲ್ಲಿ ಅಭ್ಯಾಸ ಮಾಡುತ್ತಿದ್ದರೆ ಆರಂಭಿಕ ಜೋಡಿ ಆಟಗಾರರು ಬಣ್ಣದ ಉಡುಪು ತೊಟ್ಟು ಅಭ್ಯಾಸ ನಡೆಸುತ್ತಿರುವುದು ಕಂಡು ಬಂತು. ಗಂಭೀರ್ ಪತ್ರಕರ್ತರೊಂದಿಗೆ ಮಾತನಾಡಿದರೂ ವಿಶ್ವಕಪ್ ಬಗ್ಗೆ ಏನೂ ಕೇಳಬೇಡಿ ಎಂದು ಹೇಳಿದರು. ಸೆಹ್ವಾಗ್ ಮೌನವಾಗಿಯೇ ಡ್ರೆಸ್ಸಿಂಗ್ ರೂಮ್ ಸೇರಿಕೊಂಡರು.