
ನವದೆಹಲಿ, ಫೆಬ್ರವರಿ 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ಭಾರತದ 45ಕ್ಕೂ ಹೆಚ್ಚು ಸೈನಿಕರು ಮೃತರಾಗಿದ್ದಾರೆ. ಈ ಕಾರಣದಿಂದಾಗಿ ಆರ್ಪಿಎಸ್ಜಿ ಕ್ರೀಡಾ ಪುರಸ್ಕಾರ ಮುಂದೂಡಲ್ಪಟ್ಟಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಭಾರತೀಯ ಸೈನಿಕರನ್ನು ಹೊಂಚು ಹಾಕಿ ಕೊಂದ ಉಗ್ರರ ವಿಕೃತ ಮನಸ್ಸಿಗೆ ಖಂಡನೆ ವ್ಯಕ್ತಪಡಿಸಿರುವ ವಿರಾಟ್, 'ನಾಳೆ ನಡೆಯಬೇಕಿದ್ದ ಆರ್ಪಿಎಸ್ಜಿ ಕ್ರೀಡಾ ಪುರಸ್ಕಾರವನ್ನು ಸದ್ಯಕ್ಕೆ ರದ್ದುಗೊಳಿಸಲಾಗಿದೆ. ಸೈನಿಕರನ್ನು ಕಳಕೊಂಡ ದುಃಖದಲ್ಲಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಸೈನಿಕರ ಹತ್ಯೆಯಿಂದಾಗಿ ಇಡೀ ದೇಶವೇ ದುಃಖದಲ್ಲಿದ್ದಾಗ ಕೊಹ್ಲಿ ಪುರಸ್ಕಾರದ ಗುಂಗಿನಲ್ಲಿದ್ದರು. ಘಟನೆ ನಡೆದ ಬಳಿಕವೂ ಪುರಸ್ಕಾರದ ಬಗ್ಗೆ ಕೊಹ್ಲಿ ಟ್ವೀಟ್ ಮಾಡಿದ್ದಾಗ ಅದಕ್ಕೆ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅನೇಕ ಕ್ರೀಡಾಭಿಮಾನಿಗಳು ಕೊಹ್ಲಿಯನ್ನು ತೀವ್ರವಾಗಿ ಖಂಡಿಸಿದ್ದರು.
ಅನಂತರ ಎಚ್ಚೆತ್ತುಕೊಂಡಿದ್ದ ಕೊಹ್ಲಿ, 'ಸೈನಿಕರ ಮೇಲಿನ ದಾಳಿಯ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ಇದಕ್ಕೆ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡ ಸೈನಿಕರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು. ಶನಿವಾರ (ಫೆಬ್ರವರಿ 16) ಪುರಸ್ಕಾರ ಕಾರ್ಯಕ್ರಮದವೇ ರದ್ದಾದ ಬಗ್ಗೆ ಕೊಹ್ಲಿ ಟ್ವಿಟರ್ನಲ್ಲೇ ಮಾಹಿತಿ ನೀಡಿದ್ದಾರೆ.