ಬೆಂಗಳೂರು, ಸೆ. 28: ಚಿನ್ನಸ್ವಾಮಿ ಕ್ರೀಡಾಂಗಣ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ ಸಿಎ) ಯಲ್ಲಿ ಕ್ರಿಕೆಟ್ ಕೌಶಲ್ಯ ಪಡೆದುಕೊಂಡ ಟೀಂ ಇಂಡಿಯಾ ಈಗ ಮಿಲಿಟರಿ ಟ್ರೈನಿಂಗ್ ಗೆ ಸಜ್ಜಾಗುತ್ತಿದೆ. ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಎಂಎಸ್ ಧೋನಿ ನೇತೃತ್ವದ ಕ್ರಿಕೆಟರ್ಸ್ ಎರಡು ದಿನಗಳ 'ಬೂಟ್ ಕ್ಯಾಂಪ್' ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಧರ್ಮಶಾಲಾದಲ್ಲಿ ಅಕ್ಟೋಬರ್ 2 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸುದೀರ್ಘ ಸರಣಿಗೆ ಚಾಲನೆ ಸಿಗಲಿದೆ. ಇದಕ್ಕಾಗಿ ಅಗತ್ಯವಾದ ದೈಹಿಕ ಸಾಮರ್ಥ್ಯ ಪರೀಕ್ಷೆ, ತರಬೇತಿ ಪಡೆಯಲು ಬೂಟ್ ಕ್ಯಾಂಪ್ [ಏನಿದು ಬೂಟ್ ಕ್ಯಾಂಪ್? ]ಅಗತ್ಯವಿದೆ ಎಂದು ನಾಯಕ ಧೋನಿ ಹಾಗೂ ನಿರ್ದೇಶಕ ರವಿಶಾಸ್ತ್ರಿ ಅವರು ನಿರ್ಧರಿಸಿದ್ದಾರೆ. ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಮ್ಮತಿಸಿದೆ.
ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಹಾಗೂ 31 ಜನ ಕ್ರಿಕೆಟರ್ಸ್ ಗಳು ಒಂದು ವಾರ ಕಾಲ ಬೆಂಗಳೂರಿನ ಎನ್ ಸಿಎಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಶನಿವಾರ (ಸೆ.26) ತರಬೇತಿ ಮುಗಿಸಿಕೊಂಡು ಸೆ. 28ರ ವೇಳೆಗೆ ಚಂದೀಗಢ ಸೇರಿದ್ದಾರೆ. ನಂತರ ಸೆ. 30ರಿಂದ ಕಠಿಣ ತರಬೇತಿ ಆರಂಭವಾಗಲಿದೆ ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಸ್ ಪಿಸಿಎ) ನ ಮಾಧ್ಯಮ ಕಾರ್ಯದರ್ಶಿ ಮೋಹಿತ್ ಸೂದ್ ಹೇಳಿದ್ದಾರೆ.
ಬೆಂಗಳೂರಿನಿಂದ ಉತ್ತರ ಭಾರತದ ಪರ್ವತ ಪ್ರದೇಶಕ್ಕೆ ತೆರಳುತ್ತಿರುವುದರಿಂದ ಎತ್ತರ ಪ್ರದೇಶದ ವಾತಾವರಣಕ್ಕೆ ಆಟಗಾರರು ಹೊಂದಿಕೊಳ್ಳಲು ಈ ರೀತಿ ತರಬೇತಿ ಅಗತ್ಯ. ಸಮುದ್ರ ಮಟ್ಟದಿಂದ ಸುಮಾರು 7,000 ಅಡಿ ಎತ್ತರದಲ್ಲಿ ಕ್ರಿಕೆಟ್ ಆಡಲು ಆಟಗಾರರನ್ನು ಸಿದ್ಧಪಡಿಸಬೇಕಿದೆ ಎಂದು ಎಚ್ ಪಿಸಿಎ ಹೇಳಿದೆ.
ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವೆ 3 ಟಿ 20 ಪಂದ್ಯಗಳು, 5 ಏಕದಿನ ಕ್ರಿಕೆಟ್ ಪಂದ್ಯ, 4 ಟೆಸ್ಟ್ ಪಂದ್ಯಗಳು ನಡೆಯಲಿವೆ. ದೆಹಲಿಯಲ್ಲಿ ಸೆಪ್ಟೆಂಬರ್ 29ರಂದು ಭಾರತ 'ಎ' ವಿರುದ್ಧ ಟಿ 20 ಅಭ್ಯಾಸ ಪಂದ್ಯವಾಡುವ ಮೂಲಕ ಪ್ರವಾಸ ಆರಂಭಿಸಲಿದೆ.