
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಈಗಾಗಲೇ ಭಾರತೀಯ ತಂಡವನ್ನು ಆಯ್ಕೆ ಮಾಡಲಾಗಿದ್ದು ತಂಡದಲ್ಲಿ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲವಾಗಿದ್ದಾರೆ. ನಿರಂತರವಾಗಿ ಕಳಪೆ ಪ್ರದರ್ಶನಗಳು ನೀಡುತ್ತಿದ್ದರೂ ಅಜಿಂಕ್ಯಾ ರಹಾನೆಗೆ ಸ್ಥಾನ ನಿಡಿದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದೆ. ಆದರೆ ಈ ಆಯ್ಕೆಗೆ ಕಾರಣವೇನು ಎಂಬ ಅಂಶವನ್ನು ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ವಿವರಿಸಿದ್ದಾರೆ.
ಅಜಿಂಕ್ಯಾ ರಹಾನೆಯನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಿದ ಭಾರತೀಯ ಕ್ರಿಕೆಟ್ ತಮಡದ ಆಯು್ಕೆ ಸಮಿತಿಯ ನಿರ್ಧಾರವನ್ನು ಎಂಎಸ್ಕೆ ಪ್ರಸಾದ್ ಬೆಂಬಲಿಸಿದ್ದಾರೆ. ಇಂಡಿಯಾ ಟುಡೇ ಜೊತೆಗೆ ಮಾತನಾಡಿದ ಎಂಎಸ್ಕೆ ಪ್ರಸಾದ್ ವಿದೇಶಿ ಪ್ರವಾಸವನ್ನು ಕೈಗೊಳ್ಳುವಾಗ ತಂಡದಲ್ಲಿ ಅನುಭವಿ ಆಟಗಾರರ ಉಪಸ್ಥಿತಿ ಬಹಳ ಮುಖ್ಯವಾಗುತ್ತದೆ. ಅಜಿಂಕ್ಯಾ ರಹಾನೆ ವಿದೇಶಿ ಪಿಚ್ಗಳಲ್ಲಿ ಯಾವಾಗಲೂ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ವಿವರಿಸಿದ್ದಾರೆ.
ಆಯ್ಕೆ ಸಮಿತಿ ತವರು ಹಾಗೂ ವಿದೇಶಿ ಸರಣಿಗಳಿಗೆ ಆಯ್ಕೆ ಮಾಡುವಾಗ ಪ್ರತ್ಯೇಕ ಮಾನದಂಡಗಳನ್ನು ಇಟ್ಟುಕೊಂಡು ಆಯ್ಕೆ ಮಾಡಬೇಕಾಗಯತ್ತದೆ ಎಂದಿದ್ದಾರೆ. ಅಲ್ಲದೆ ವಿದೇಶಿ ಪ್ರವಾಸ ತೆರಳುವಾಗ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಸಮ್ಮಿಶ್ರಣ ಇರುವ ಅಗತ್ಯವಿದೆ. ಹಾಗಿದ್ದಾಗ ಮಾತ್ರವೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಎಂಎಸ್ಕೆ ಪ್ರಸಾದ್ ವಿವರಿಸಿದ್ದಾರೆ. ದಕ್ಷಿಣ ಆಫ್ರಿಕಾಗೆ ತೆರಳುವ ಭಾರತ ತಂಡದ 18 ಸದಸ್ಯರ ಟೆಸ್ಟ್ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದರಲ್ಲಿ ಅಜಿಂಕ್ಯಾ ರಹಾನೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ಸವಿಯಾಗಿದ್ದರೂ ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಏಕದಿನ ಹಾಗೂ ಟಿ20 ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಟೆಸ್ಟ್ ತಂಡದ ಉಪನಾಯಕನಾಗಿ ನೇಮವಾಗಿದ್ದಾರೆ.
"ಅಂತಿಮವಾಗಿ ತಂಡ ಜೂನಿಯರ್ ಹಾಗೂ ಸೀನಿಯರ್ಗಳ ಅತ್ಯುತ್ತಮ ಮಿಶ್ರಣವಾಗಿರಬೇಕು. 2013ರ ಪ್ರವಾಸದಲ್ಲಿಯೂ ಅಜಿಂಕ್ಯಾ ರಹಾಣೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಸಾಮಾನ್ಯವಾಗಿ ವಿದೇಶಿ ಸರಣಿಗಳಲ್ಲಿ ರಹಾಣೆಯಿಂದ ಉತ್ತಮ ಪ್ರದರ್ಶನ ಬರುತ್ತದೆ. ಆದರೆ ತವರಿನಲ್ಲಿ ಅವರ ಸಾಧನೆಗಳು ಶ್ರೇಷ್ಠವಾಗಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕಂಡು ತವರಿನಲ್ಲಿ ಆಡಲು ಇಳಿಸಬಹುದಾದ ಆಟಗಾರರು ಹಾಗೂ ವಿದೇಶಿ ಪಿಚ್ಗಳಲ್ಲಿ ಆಡುವ ಆಟಗಾರರನ್ನು ಆಯ್ಕೆಯಲ್ಲಿ ಪರಿಗಣಿಸಬಹುದು" ಎಂದು ಎಂಎಸ್ಕೆ ಪ್ರಸಾದ್ ಹೇಳಿದ್ದಾರೆ.
"ಸಾಮಾನ್ಯವಾಗಿ ವಿದೇಶಿ ನೆಲದಲ್ಲಿ ರಹಾನೆ ಉತ್ತಮವಾಗಿ ಆಡುತ್ತಾರೆ. ಆದರೆ ಅವರ ಫಾರ್ಮ್ ಕಾರಣದಿಂದಾಗಿ ಆಯ್ಕೆಗಾರರು ಗೊಂದಲದಲ್ಲಿದ್ದರು. ಆದರೆ ಅವರು ರಹಾನೆಯನ್ನು ಬಿಟ್ಟು ಬೇರೆ ಆಟಗಾರತ್ತ ಗಮನಹರಿಸಬೇಕೋ ಅಥವಾ ಅನುಭವಿ ಆಟಗಾರನಿಗೆ ಬೆಂಬಲವನ್ನು ನೀಡಬೇಕಾ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜನ್ ನಾಗ್ವಾಸ್ವಾಲ್ಲಾ