
ಬೆಂಗಳೂರು: ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಆವತ್ತು ಭಾರತದ ಗೆಲುವಿನಲ್ಲಿ ತಂಡದ ಯುವ ಆಟಗಾರರ ಪಾತ್ರ ಮಹತ್ವದ್ದಾಗಿತ್ತು. ಹೀಗಾಗಿಯೇ ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು.
ಟೀಮ್ ಇಂಡಿಯಾದ ಗೆಲುವಿಗೆ 'ಗ್ರೇಟ್ ವಾಲ್' ರಾಹುಲ್ ದ್ರಾವಿಡ್ ಹೇಗೆ ಕಾರಣ ಎಂದು ಕೇಳಬಹುದು. ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಲ್ಲಿ ಹೆಚ್ಚಿನವರು ದ್ರಾವಿಡ್ ಮಾರ್ಗದರ್ಶನದಲ್ಲಿ ಪಳಗಿದವರು. ಹೀಗಾಗಿಯೇ ಆಸ್ಟ್ರೇಲಿಯಾ ಗೆಲುವಿನಲ್ಲಿ ದ್ರಾವಿಡ್ ಪಾತ್ರ ಹೇಗೆ ನೆರವಾಯ್ತು ಅನ್ನೋದನ್ನು ತಂಡದ ನಾಯಕರಾಗಿದ್ದ ಅಜಿಂಕ್ಯ ರಹಾನೆ ಹೇಳಿಕೊಂಡಿದ್ದಾರೆ.
'ನನಗನ್ನಿಸುತ್ತದೆ, ಈ ಗೆಲುವಿನಲ್ಲಿ ರಾಹುಲ್ ಅಣ್ಣನ ಪಾತ್ರ ಮಹತ್ವದ್ದಾಗಿದೆ. ಲಾಕ್ಡೌನ್ಗೂ ಮುನ್ನ ನಾವು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಗೆ ಹೋಗಿದ್ದೆವು. ಅಲ್ಲಿ ರಾಹುಲ್ ಅವರಂತವರೊಬ್ಬರು ಇದ್ದಾರೆಂದರೆ ನೀವು ಪ್ರತೀದಿನ ಹೊಸದೇನನ್ನೋ ಕಲಿಯುತ್ತಲೇ ಇರುತ್ತೀರಿ,' ಎಂದು ರಹಾನೆ ಹೇಳಿದ್ದಾರೆ.
'ದ್ರಾವಿಡ್ ಅವರು ಅಂಡರ್-19 ತಂಡದ ಜೊತೆಗಿದ್ದರು. ಬಳಿಕ ಅವರು ಇಂಡಿಯಾ 'ಎ' ಜೊತೆಗಿದ್ದು ಮಾರ್ಗದರ್ಶನ ನೀಡಿದ್ದರು, ಈಗ ಎನ್ಸಿಎಯಲ್ಲಿದ್ದಾರೆ. ಅವರ ಮಾರ್ಗದರ್ಶನದ ವ್ಯವಸ್ಥೆಯೇ ಮೊಹಮ್ಮದ್ ಸಿರಾಜ್, ನವದೀಪ್ ಸೈನಿಗೆ ನೆರವಾಗಿದೆ. ಶುಬ್ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮುನ್ನ ಭಾರತ 'ಎ' ತಂಡದಲ್ಲಿ ಬಹಳಷ್ಟು ಟೂರ್ಗಳನ್ನು ಮಾಡಿದ್ದರು,' ಎಂದು ರಹಾನೆ ವಿವರಿಸಿದ್ದಾರೆ.