ರಣಜಿ ಟ್ರೋಫಿ ಟೂರ್ನಿಯ ಉತ್ಸಾಹ ಉತ್ತುಂಗಕ್ಕೇರಿದೆ. ಮುಂಬೈ ತಂಡವು ಹರಿಯಾಣ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಮೂಲಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಚಿತ್ತ ಕದ್ದಿದ್ದಾರೆ. ರಹಾನೆ ಅದ್ಭುತ ಶತಕ ಗಳಿಸುವ ಮೂಲಕ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಜೀವ ತುಂಬಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ರಹಾನೆ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ರನ್ ಗಳಿಸುತ್ತಿರುವುದು ಕಂಡುಬಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಪ್ರವಾಸದಿಂದ ಸ್ಟಾರ್ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲನ್ನು ಎದುರಿಸಿತು. ಈಗ ರಹಾನೆ ಅವರ ಪ್ರದರ್ಶನವು ಬಿಸಿಸಿಐ ಆಯ್ಕೆದಾರರಿಗೆ ಮತ್ತೊಮ್ಮೆ ಗೊಂದಲವನ್ನುಂಟು ಮಾಡಿದೆ.

ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕ. ರಣಜಿ ಟ್ರೋಫಿ ಋತುವಿನಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ರಹಾನೆ ನೇತೃತ್ವದ ತಂಡ ಸೋಲು ಕಂಡಿತ್ತು. ಆದರೆ, ಈಗ ಅವರು ಮತ್ತೊಮ್ಮೆ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದಾರೆ. ಮೇಘಾಲಯ ವಿರುದ್ಧದ ಕೊನೆಯ ಪಂದ್ಯದಲ್ಲಿ ರಹಾನೆ 96 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ದುರದೃಷ್ಟವಶಾತ್ ಅವರು ಶತಕ ವಂಚಿತರಾದರು. ಆದರೆ ಹರಿಯಾಣ ವಿರುದ್ಧ ಶತಕ ಗಳಿಸುವ ಮೂಲಕ ರಹಾನ್ ಭಾರತೀಯ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ್ದಾರೆ.
ರಣಜಿಯಲ್ಲಿ ರಹಾನೆ ಒಂದರ ನಂತರ ಒಂದರಂತೆ ಶತಕಗಳನ್ನು ಗಳಿಸುತ್ತಿರುವುದು ಕಂಡುಬಂದಿತು. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ರಹಾನೆ ತಮ್ಮ ಅದ್ಭುತ ಫಾರ್ಮ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರು 8 ಇನ್ನಿಂಗ್ಸ್ಗಳಲ್ಲಿ 469 ರನ್ ಗಳಿಸಿದರು. ಈ ವೇಳೆ ರಹಾನೆ 98 ಮತ್ತು 95 ರನ್ ಗಳಿಸಿ ಎರಡು ಬಾರಿ ಔಟಾದರು.
ಈಗ ಹರಿಯಾಣ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 180 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 108 ರನ್ ಕಲೆ ಹಾಕಿದ್ದಾರೆ. ಈ ಅದ್ಭುತ ಇನ್ನಿಂಗ್ಸ್ ಆಡಿರುವ ಅವರು ಮತ್ತೊಮ್ಮೆ ಟೀಮ್ ಇಂಡಿಯಾಕ್ಕೆ ಮರಳುತ್ತಾರೋ? ಇಲ್ಲವೋ? ಎಂಬುದು ಕುತೂಹಲಕಾರಿಯಾಗಿದೆ.