ಹಾಲಿ ಚಾಂಪಿಯನ್ ಪಟ್ಟವನ್ನು ಹೊಂದಿರುವ ಕೋಲ್ಕತ್ತಾ ನೈಟ್ ರೈಡರ್ಸ್, ಈ ಬಾರಿ ನವ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ. ಈ ಬಾರಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಸ್ಟಾರ್ ಆಟಗಾರರನ್ನು ತನ್ನ ಒಡಲಿನಲ್ಲಿ ಹೊಂದಿದೆ. ಮತ್ತೊಮ್ಮೆ ಸ್ಥಿರ ಪ್ರದರ್ಶನವನ್ನು ನೀಡುವ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಈ ವೇಳೆ ಎಲ್ಲರ ಮನದಲ್ಲಿರುವ ಪ್ರಶ್ನೆ ಒಂದೇ. ಕೆಕೆಆರ್ ಕ್ಯಾಪ್ಟನ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದಾಗಿದೆ.
ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಭಾರೀ ಮೊತ್ತವನ್ನು ನೀಡಿ ವೆಂಕಟೇಶ್ ಅಯ್ಯರ್ ಅವರಿಗೆ ಮಣೆ ಹಾಕಿತ್ತು. ಇಷ್ಟು ಮೊತ್ತವನ್ನು ನೀಡಿದ್ದು ಕಂಡು ಅಭಿಮಾನಿಗಳು ಇವರಿಗೆ ನಾಯಕತ್ವ ಸಿಗಬಹುದು ಎಂದು ಅಂದಾಜಿಸಾಗಿತ್ತು. ಆದರೆ ಮ್ಯಾನೇಜ್ಮೆಂಟ್ ತನ್ನ ತಂಡದ ಅನುಭವಿ ಆಟಗಾರನಿಗೆ ಮಣೆ ಹಾಕಿದೆ. 1.50 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿದ್ದ ಅಜಿಂಕ್ಯ ರಹಾನೆ ಅವರಿಗೆ ಕೆಕೆಆರ್ ನಾಯಕತ್ವ ನೀಡಿದೆ.

ಮೂಲಗಳ ಪ್ರಕಾರ ಅಜಿಂಕ್ಯ ರಹಾನೆ ಈ ಆವೃತ್ತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಇವರು ವೆಂಕಟೇಶ್ ಅಯ್ಯರ್ ಅವರ ಸ್ಥಾನದಲ್ಲಿ ಆಡಲಿದ್ದಾರೆ. ಹಾಗಿದ್ದರೆ ವೆಂಕಟೇಶ್ ಅಯ್ಯರ್ ಯಾವ ಸ್ಥಾನದಲ್ಲಿ ಆಡಿ ಯಶಸ್ಸು ಸಾಧಿಸಿದ್ದಾರೆ. ರಹಾನೆ ಆರಂಭಿಕರಾಗಿ ಕಣಕ್ಕೆ ಇಳಿಯಬಹುದಿತ್ತು. ಆದರೆ ಮ್ಯಾನೇಜ್ಮೆಂಟ್ ಕ್ವಿಂಟನ್ ಡಿಕಾಕ್, ಸುನಿಲ್ ನರೈನ್ ಅವರನ್ನು ಓಪನರ್ ಆಗಿ ನೋಡುತ್ತಿದೆ.
ಅಜಿಂಕ್ಯ ರಹಾನೆ ಒಬ್ಬ ಉತ್ತಮ ಲೀಡರ್ ಎಂಬುದನ್ನು ಸಮಯ ಸಿಕ್ಕಾಗಲೆಲ್ಲಾ ಸಾಬೀತು ಪಡಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಮುಂಬೈ ತಂಡ 2023-24ರಲ್ಲಿ ರಣಜಿ ಟ್ರೋಫಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಅಲ್ಲದೆ ರಹಾನೆ ಈ ಸಾಲಿನ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಈ ವೇಳೆ ಇವರು ಇನಿಂಗ್ಸ್ ಆರಂಭಿಸಿ ಮುಂಬೈಗೆ ಭದ್ರ ಆರಂಭ ನೀಡುತ್ತಿದ್ದರು. ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ರಹಾನೆ 164 ಸ್ಟ್ರೈಕ್ ರೇಟ್ನಲ್ಲಿ 469 ರನ್ ಸಿಡಿಸಿದ್ದಾರೆ.
ಸೋಮವಾರ ಈಡನ್ ಗಾರ್ಡನ್ಸ್ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ರಹಾನೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೊದಲ ಪಂದ್ಯದಲ್ಲಿ 13 ರನ್ ಹಾಗೂ ಎರಡನೇ ಪಂದ್ಯದಲ್ಲಿ 11 ರನ್ ಬಾರಿಸಿ ನಿರಾಸೆ ಅನುಭವಿಸಿದರು. ಆದರೆ ಇವರು ಕಳೆದ ಆವೃತ್ತಿಯಲ್ಲಿ ನೀಡಿದ ಸ್ಥಿರ ಪ್ರದರ್ಶನವನ್ನೇ ಮುಂದುವರೆಸುವ ಸಾಧ್ಯತೆ ಇದೆ.
ಐಪಿಎಲ್ನಲ್ಲಿ ಅಜಿಂಕ್ಯ ರಹಾನೆ 25 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ತಂಡ 9 ರಲ್ಲಿ ಜಯ ಸಾಧಿಸಿದ್ದು, 16 ರಲ್ಲಿ ಸೋಲು ಕಂಡಿದೆ. ಇವರು ಐಪಿಎಲ್ನಲ್ಲಿ ಈ ವರೆಗೆ 185 ಪಂದ್ಯಗಳನ್ನು ಆಡಿದ್ದು 30ರ ಸರಾಸರಿಯಲ್ಲಿ 4642 ರನ್ ಸಿಡಿಸಿದ್ದಾರೆ. ಈ ವೇಳೆ 2 ತತಕ ಹಾಗೂ 30 ಅರ್ಧಶತಕಗಳು ಸೇರಿವೆ.