ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಗುರುವಾರ ದೇಶೀಯ ಟೂರ್ನಿಯಲ್ಲಿ ಮುಂಬೈ ತಂಡದ ನಾಯಕತ್ವ ತ್ಯಜಿಸುವುದಾಗಿ ತಿಳಿಸಿದ್ದಾರೆ. ದೇಶೀಯ ರಣಜಿ ಟೂರ್ನಿ ಆರಂಭವಾಗುವ ಮುನ್ನವೇ ಅಜಿಂಕ್ಯ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅಜಿಂಕ್ಯ ತಮ್ಮ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಮುಂಬೈ ತಂಡವನ್ನು ದೇಶೀಯ ಟೂರ್ನಿಯಲ್ಲಿ ಮುನ್ನಡೆಸುವುದು, ಅಲ್ಲದೆ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸುವುದು ದೊಡ್ಡ ಗೌರವ. ಇನ್ನೇನು ಕೆಲವೇ ದಿನಗಳಲ್ಲಿ ದೇಶೀಯ ಟೂರ್ನಿ ಆರಂಭವಾಗಲಿದ್ದು, ಈ ವೇಳೆಯಲ್ಲಿ ಹೊಸ ನಾಯಕನಿಗೆ ಅವಕಾಶ ನೀಡಬೇಕು. ಹೀಗಾಗಿ ಮುಂಬೈ ತಂಡದ ನಾಯಕನ ಜವಾಬ್ದಾರಿಯಲ್ಲಿ ನಾನು ಮುಂದುವರೆಯುವುದಿಲ್ಲ ಎಂದು ರಹಾನೆ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ನಾನು ನನ್ನ ತಂಡದ ಪರ ಆಡಲು ಸಿದ್ಧನಿರುವುದಾಗಿ ತಿಳಿಸಿದ್ದಾರೆ.

ಅಜಿಂಕ್ಯ ರಹಾನೆ ಅವರ ಮುಂದಾಳತ್ವದಲ್ಲಿ ಮುಂಬೈ ತಂಡ ಏಳು ವರ್ಷಗಳ ಪ್ರಶಸ್ತಿ ಗೆಲುವಿನ ಬರಕ್ಕೆ ಬ್ರೇಕ್ ಹಾಕಿತ್ತು. 2023-24ರಲ್ಲಿ ಮುಂಬೈ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿಧರ್ಭ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿತ್ತು. ಅಲ್ಲದೆ ರಹಾಣೆ ಇರಾನಿ ಕಪ್ 2024-25 ಟೂರ್ನಿಯಲ್ಲೂ ತಂಡಕ್ಕೆ ಪ್ರಶಸ್ತಿ ತೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೆ ಸೈಯದ್ ಮುಷ್ತಾಕ್ ಅಲಿ 2022-23ರಲ್ಲೂ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ್ದರು.
ಮುಂಬೈ ತಂಡದ ನಾಯಕತ್ವದಿಂದ ಅಷ್ಟೇ ಕೆಳಗಿಳಿದದ್ದಾಗಿ ರಹಾನೆ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ತಾವು ನಿವೃತ್ತಿ ಹೊಂದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಮುಂಬೈ ತಂಡದ ಪರ ಆಟಗಾರನಾಗಿ ತಾನು ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ. ರಹಾನೆ ಈಗಾಗಲೇ 201 ಪ್ರಥಮ ದರ್ಜೆ ಪಂದ್ಯಗಳಲ್ಲಿ 14 ಸಾವಿರ ರನ್ ಸಿಡಿಸಿದ್ದಾರೆ.

ಮುಂಬೈ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ. ತಂಡದಲ್ಲಿ ನಾಯಕತ್ವ ಗುಣಗಳನ್ನು ಹೊಂದಿರುವ ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರ ದಂಡೇ ಇದೆ. ಕೈಸ್ವಾಲ್, ಸರ್ಫಾರಜ್ ಸಹ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದಾರೆ. ಇನ್ನು ಶ್ರೇಯಸ್ ಈಗಾಗಲೇ ಐಪಿಎಲ್ನಲ್ಲಿ ಮೂರು ತಂಡಗಳನ್ನು ಮುನ್ನಡೆಸಿದ್ದಾರೆ. ಅಲ್ಲದೆ ಸೂರ್ಯಕುಮಾರ್ ಯಾದವ್ ಈಗ ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್ನಲ್ಲಿ ಮುನ್ನಡೆಸುತ್ತಿದ್ದಾರೆ. ಸದ್ಯ ಜೈಸ್ವಾಲ್ ಟೆಸ್ಟ್ ತಂಡದ ಭಾಗವಾಗಿರುವುದರಿಂದ ಮುಂಬೈ ಬೇರೆ ಆಟಗಾರನತ್ತ ಮುಖ ಮಾಡಲಿದೆ.
ರಹಾನೆ ಐಪಿಎಲ್ನಲ್ಲಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು. ಈ ಲೀಗ್ನಲ್ಲಿ ಅವರು 13 ಪಂದ್ಯಗಳಲ್ಲಿ 390 ರನ್ ಸಿಡಿಸಿದ್ದರು. ಮುಂಬೈ ತಂಡದ ನಾಯಕತ್ವದಿಂದ ರಹಾನೆ ಕೆಳಗಿಳಿದ ಬಳಿಕ ಐಪಿಎಲ್ನಲ್ಲಿ ಇವರು ನಾಯಕರಾಗಿ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ದೇಶೀಯ ರಣಜಿ ಟೂರ್ನಿ ಅಕ್ಟೋಬರ್ನಲ್ಲಿ ಆರಂಭವಾಗಲಿದೆ. ಮುಂಬೈ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಕಾಶ್ಮೀರ್ ವಿರುದ್ಧ ಕಾದಾಟ ನಡೆಸಲಿದೆ.