ಇತ್ತೀಚಿಗೆ ಭಾರತ ಕ್ರಿಕೆಟ್ ತಂಡದ ಆಟಗಾರರ ಕೇಂದ್ರೀಯ ಗುತ್ತಿಗೆ ಪಟ್ಟಿಯನ್ನು ನವೀಕರಣ ಮಾಡಲಾಯಿತು. ಈ ವೇಳೆ ನಿರೀಕ್ಷಿತವಾಗಿ ಇಬ್ಬರು ಆಟಗಾರರು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಯಿತು. ಭಾರತ ತಂಡದಿಂದ ಹೊರಗುಳಿದಿದ್ದರೂ, ದೇಶೀಯ ಕ್ರಿಕೆಟ್ ಆಡದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಯಿತು.
ಬಿಸಿಸಿಐ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡುವುದು ಸಂಪೂರ್ಣವಾಗಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ನಿರ್ಧಾರ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ.

ಬಿಸಿಸಿಐ ಸೂಚಿನೆಯ ಹೊರತಾಗಿಯೂ ದೇಶೀಯ ಟೂರ್ನಿಯಲ್ಲಿ ಹಾಜರಾಗಲು ವಿಫಲರಾದ ನಂತರ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಗಿದೆ.
ಕಳೆದ ವರ್ಷ ಏಕದಿನ ವಿಶ್ವಕಪ್ನ ನಂತರ, ಇಶಾನ್ ಕಿಶನ್ ಸುದೀರ್ಘ ವಿಶ್ರಾಂತಿ ತೆಗೆದುಕೊಂಡರು ಮತ್ತು ಐಪಿಎಲ್ವರೆಗೆ ಅಲಭ್ಯರಾಗಿದ್ದರು. ಶ್ರೇಯಸ್ ಅಯ್ಯರ್ ಮುಂಬೈ ಪರ ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಕೆಲವು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದರು.
ಆದಾಗ್ಯೂ, ಶ್ರೇಯಸ್ ಅಯ್ಯರ್ ಅವರು ತಮ್ಮ ತವರು ತಂಡ ರಣಜಿ ಟ್ರೋಫಿ ಪಂದ್ಯ ಆಡುತ್ತಿರುವಾಗ ಮುಂಬೈನಲ್ಲಿ ನಡೆದ ಕೆಕೆಆರ್ ಶಿಬಿರದಲ್ಲಿ ಭಾಗವಹಿಸಿದ್ದರು ಎಂಬುದು ಬಹಿರಂಗವಾದ ನಂತರ, ಬಿಸಿಸಿಐನಿಂದಿ ಶಿಕ್ಷೆ ಸ್ವೀಕರಿಸಲು ಬದ್ಧರಾದರು.

"ನೀವು ಬಿಸಿಸಿಐ ಸಂವಿಧಾನವನ್ನು ಪರಿಶೀಲಿಸಬಹುದು. ನಾನು ಆಯ್ಕೆ ಸಭೆಯ ಸಂಚಾಲಕ ಮಾತ್ರ.'' ಎಂದು ಜಯ್ ಶಾ ಅವರು ಗುರುವಾರ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿದರು.
"ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಈ ಇಬ್ಬರು ಆಟಗಾರರು ದೇಶೀಯ ಕ್ರಿಕೆಟ್ ಆಡದ ಕಾರಣ, ಅವರನ್ನು ಕೇಂದ್ರ ಒಪ್ಪಂದಗಳ ಪಟ್ಟಿಯಿಂದ ಕೈಬಿಡುವ ನಿರ್ಧಾರ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರದ್ದಾಗಿತ್ತು. ಕಾರ್ಯರೂಪಕ್ಕೆ ತರುವುದಷ್ಟೇ ನನ್ನ ಪಾತ್ರ. ಮತ್ತು ನಾವು ಸಂಜು ಸ್ಯಾಮ್ಸನ್ನಂತಹ ಹೊಸ ಆಟಗಾರರನ್ನು ಆ ಸ್ಥಾನದಲ್ಲಿ ಪಡೆದಿದ್ದೇವೆ. ಯಾರೂ ಅನಿವಾರ್ಯವಲ್ಲ," ಎಂದು ಜಯ್ ಶಾ ಹೇಳಿದರು.
ಬಿಸಿಸಿಐ ಒಪ್ಪಂದವನ್ನು ರದ್ದುಗೊಳಿಸುವ ಮುನ್ನ, 2024ರ ಫೆಬ್ರವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಜಯ್ ಶಾ ಅವರು ಭಾರತೀಯ ನಾಯಕ ಮತ್ತು ತಂಡದ ಮ್ಯಾನೇಜ್ಮೆಂಟ್ ಅವಶ್ಯಕತೆಗಳನ್ನು ಪೂರೈಸದ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಮುಖ್ಯ ಆಯ್ಕೆಗಾರರ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.

ದೇಶೀಯ ಕ್ರಿಕೆಟ್ನಲ್ಲಿ ಭಾಗವಹಿಸದ ಆಟಗಾರರನ್ನು ತೆಗೆದುಹಾಕಿದ ನಂತರ, ಅವರೊಂದಿಗೆ ಸಂವಹನ ನಡೆಸಿದ್ದೇನೆ ಎಂದು ಜಯ್ ಶಾ ಹೇಳಿದ್ದಾರೆ. "ಹೌದು, ನಾನು ಅವರೊಂದಿಗೆ ಮಾತನಾಡಿದ್ದೇನೆ. ಮಾಧ್ಯಮಗಳು ವರದಿಗಳನ್ನು ಸಹ ಮಾಡಿದ್ದವು," ಎಂದು ತಿಳಿಸಿದರು.
"ಬಿಸಿಸಿಐ ನನ್ನನ್ನು ವೈಟ್ ಬಾಲ್ ತಂಡಕ್ಕೆ ಪರಿಗಣಿಸದಿದ್ದರೆ, ನಾನು ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಡಲು ಸಿದ್ಧನಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಕೂಡ ಹೇಳಿದ್ದಾರೆ. ಯಾವುದೇ ಆಟಗಾರನು ಅವರು ಬಯಸದಿದ್ದರೂ ಸಹ ಆಡಬೇಕಾಗುತ್ತದೆ," ಎಂದು ಜಯ್ ಶಾ ಹೇಳಿದರು.