ಸೋಮವಾರ, ಜುಲೈ 22ರಂದು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿವಿಧ ವಿಷಯಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಅನುಭವಿ ವೇಗಿ ಮೊಹಮ್ಮದ್ ಶಮಿ ಗಾಯ ಮತ್ತು ಚೇತರಿಕೆ, ಹೊಸ ವೇಗದ ಬೌಲರ್ಗಳು ತಮ್ಮ ಟೆಸ್ಟ್ ಪದಾರ್ಪಣೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಂತೆ ಮಾಹಿತಿಗಳನ್ನು ಹಂಚಿಕೊಂಡರು.

ಭಾರತ ತಂಡದ ಬೌಲಿಂಗ್ ದಾಳಿಯಲ್ಲಿ ಪ್ರಮುಖ ವೇಗಿಯಾಗಿರುವ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್ ನಂತರ, ಪಾದದ ಗಾಯದ ಕಾರಣ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಿದ್ದರಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿದ್ದಾರೆ.
ಮೊಹಮ್ಮದ್ ಶಮಿ ಅನುಪಸ್ಥಿತಿಯು ವಿಶೇಷವಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಸಮಯದಲ್ಲಿ ತೀವ್ರವಾಗಿ ಪರಿಣಾಮ ಬೀರಿದೆ. ಇದೀಗ ಬಲಗೈ ವೇಗಿ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಭಾರತ ತಂಡಕ್ಕೆ ಪುನರಾಗಮನ ಮಾಡಲು ತಯಾರಿ ನಡೆಸುತ್ತಿದ್ದಾರೆ.

2023ರ ಏಕದಿನ ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಪ್ರಭಾವಶಾಲಿ ಬೌಲಿಂಗ್ ಪ್ರದರ್ಶನ ನೀಡಿದರು. ಅಲ್ಲಿ ಆಡಿದ ಏಳು ಪಂದ್ಯಗಳಲ್ಲಿ 24 ವಿಕೆಟ್ಗಳೊಂದಿಗೆ ಪಂದ್ಯಾವಳಿಯ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದರು. ಇದು ಭಾರತ ತಂಡಕ್ಕೆ ಅವರ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಮೊಹ್ಮಮದ್ ಶಮಿ ಚೇತರಿಕೆಯ ಕುರಿತು ಆಯ್ಕೆಗಾರರು ನವೀಕರಣ ಒದಗಿಸಿದ್ದಾರೆ.
"ಈ ಸಮಯದಲ್ಲಿ ಕೆಲವು ಗಾಯಗೊಂಡ ಆಟಗಾರರಿದ್ದಾರೆ ಮತ್ತು ಅವರು ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ. ಮೊಹಮ್ಮದ್ ಶಮಿ ಬೌಲ್ ಮಾಡಲು ಪ್ರಾರಂಭಿಸಿದ್ದಾರೆ, ಇದು ಒಳ್ಳೆಯ ಸೂಚನೆಯಾಗಿದೆ. ಸೆಪ್ಟೆಂಬರ್ 19ರಂದು ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಯಾವಾಗಲೂ ಗುರಿಯಾಗಿದೆ. ಚೇತರಿಸಿಕೊಳ್ಳಲು ಅದು ಅವರ ಟೈಮ್ಲೈನ್ ಆಗಿದೆಯೇ ಎಂದು ನನಗೆ ತಿಳಿದಿಲ್ಲ. ಅದರ ಬಗ್ಗೆ ಎನ್ಸಿಎಯಲ್ಲಿರುವ ಹುಡುಗರನ್ನು ಕೇಳಬೇಕಾಗುತ್ತದೆ," ಎಂದು ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು, ಭಾರತದ ವೇಗದ ಬೌಲಿಂಗ್ ಸಂಪನ್ಮೂಲಗಳ ಆಳವನ್ನು ಸಹ ಒತ್ತಿ ಹೇಳಿದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುವ ಕೆಲವು ತಾಜಾ ಮುಖಗಳು ಇರಬಹುದು ಎಂದು ಅವರು ನಂಬಿದ್ದಾರೆ.
"ಹಲವು ಟೆಸ್ಟ್ಗಳು ಮುಂದೆ ಬರಲಿವೆ. ನಮಗೆ ಸ್ವಲ್ಪ ಡೆಪ್ತ್ ಬೇಕಾಗುತ್ತದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಸ್ವಲ್ಪ ಸಮಯದವರೆಗೆ ಇದ್ದಾರೆ, ಇದು ಸ್ಪಷ್ಟವಾಗಿದೆ. ಹೆಚ್ಚಿನ ಪ್ರಥಮ ದರ್ಜೆ ಕ್ರಿಕೆಟ್ ಬರುತ್ತಿದೆ. ಆದ್ದರಿಂದ ನಾವು ಅಂತಹ ಹುಡುಗರನ್ನು ನಿರ್ಮಿಸಬಹುದು," ಎಂದು ಅಜಿತ್ ಅಗರ್ಕರ್ ತಿಳಿಸಿದರು.
ಹೊಸದಾಗಿ ನೇಮಕಗೊಂಡ ಮುಖ್ಯ ಕೋಚ್ ಗೌತಮ್ ಗಂಭೀರ್ ಅಡಿಯಲ್ಲಿ, ಭಾರತ ತಂಡವು ಜುಲೈ 27ರಂದು ಪ್ರಾರಂಭವಾಗುವ ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ಶ್ರೀಲಂಕಾ ಪ್ರವಾಸಕ್ಕೆ ಸಿದ್ಧವಾಗಿದೆ.
ನಂತರ, ಭಾರತ ತಂಡವು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಸ್ವದೇಶಿ ಸರಣಿಯಲ್ಲಿ ಮುಖಾಮುಖಿಯಾಗುತ್ತದೆ. ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಎದುರಿಸಲಿದೆ.