
ನವದೆಹಲಿ, ಆಗಸ್ಟ್ 17: ರಸ್ಲರ್ ಬಜರಂಗ್ ಪೂನಿಯಾ ಮತ್ತು ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಹೆಸರನ್ನು ಭಾರತದ ಅತ್ಯುನ್ನತ ಪ್ರಶಸ್ತಿಯಾದ 'ರಾಜೀವ್ ಗಾಂಧಿ ಖೇಲ್ ರತ್ನ'ಕ್ಕೆ ಶಿಫಾರಸು ಮಾಡಲಾಗಿದೆ. ಹಾಗೆಯೇ, ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಸದ್ಯ ಪುರುಷರ ರಸ್ಲಿಂಗ್ನಲ್ಲಿ ವಿಶ್ವ ನಂ.1 ಸ್ಥಾನದಲ್ಲಿರುವ ಬಜರಂಗ್, ಇತ್ತೀಚೆಗೆ ಜಾರ್ಜಿಯಾದಲ್ಲಿ ನಡೆದ 'ಟಿಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್'ನ 65 ಕೆಜಿ ವಿಭಾಗದಲ್ಲಿ ಇರಾನ್ನ ಪೀಮನ್ ಬಿಬಯಾನಿ ಸೋಲಿಸಿ ಪ್ರಶಸ್ತಿ ಉಳಿಸಿಕೊಂಡಿದ್ದರು. ಚೀನಾದ ಕ್ಸಿಯಾನ್ನಲ್ಲಿ ನಡೆದಿದ್ದ ಏಷ್ಯಾನ್ ರಸ್ಲಿಂಗ್ ಚಾಂಪಿಯನ್ಷಿಪ್ನಲ್ಲೂ ಬಂಗಾರ ಗೆದ್ದಿದ್ದ ಪೂನಿಯಾ, ಏಷ್ಯಾದಲ್ಲಿ ಪ್ರಭುತ್ವ ಸಾಧಿಸಿದ್ದರು.
ಪ್ಯಾರಾ ಒಲಿಂಪಿಕ್ಸ್ನಲ್ಲಿ ರಜತ ಪದಕ ವಿಜೇತ ಶಾಟ್ ಪುಟ್ ಸ್ಪರ್ಧಿ ದೀಪಾ, 'ಖೇಲ್ ರತ್ನ'ಕ್ಕೆ ಶಿಫಾರಸಾಗಿದ್ದಾರೆ. ಪ್ಯಾರಾಲಂಪಿಕ್ ಸ್ಪರ್ಧೆಗಳಲ್ಲಿ ಒಟ್ಟು 58 ರಾಷ್ಟ್ರೀಯ, 23 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ಮೊದಲ ಮಹಿಳಾ ಅಥ್ಲೀಟ್ ದೀಪಾ ಮಲಿಕ್. ದೀಪಾಗೆ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳು ಲಭಿಸಿವೆ.
ಭಾರತದ ಕ್ರಿಕೆಟ್ ತಂಡದಲ್ಲಿ ಬೌಲಿಂಗ್, ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್ಗಾಗಿಯೂ ಗುರುತಿಸಿಕೊಂಡಿರುವ ಜಡೇಜಾ ಹೆಸರು 'ಅರ್ಜುನ'ಕ್ಕೆ ಶಿಫಾರಸಾಗಿದೆ. ಜಡೇಜಾ, 156 ಏಕದಿನ ಪಂದ್ಯಗಳಲ್ಲಿ 2128 ರನ್, 42 ಟಿ20ಐಗಳಲ್ಲಿ 135 ರನ್ ಮತ್ತು 41 ಟೆಸ್ಟ್ ಪಂದ್ಯಗಳಲ್ಲಿ 1485 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ 2019ರಲ್ಲಿ ಜಡೇಜಾ, ನ್ಯೂಜಿಲೆಂಡ್-ಭಾರತ ನಡುವಣ ಸೆಮಿಫೈನಲ್ನಲ್ಲಿ ಭಾರತೀಯರ 3ನೇ ವಿಶ್ವಕಪ್ ಟ್ರೋಫಿ ಆಸೆಯನ್ನು ಕೊಂಚ ಕಾಲ ಜೀವಂತವಾಗಿರಿಸಿದ್ದನ್ನು ಮರೆಯುವಂತಿಲ್ಲ. ಆದರೆ ಈ ಪಂದ್ಯದಲ್ಲಿ ಭಾರತ 18 ರನ್ ಸೋಲನುಭವಿಸಿತ್ತು.