ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯನ್ನು ಆಡಲು ಈಗಾಗಲೇ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಪ್ರವಾಸವನ್ನು ಬೆಳೆಸಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಜೂನ್ 11 ರಂದು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳಲ್ಲಿ ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪಂದ್ಯ ಮುಗಿದ ಬಳಿಕ 2025-27ರ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಲಿದೆ. ಈ ಸರಣಿಗೆ ಟೀಮ್ ಇಂಡಿಯಾ ಭರದ ತಯಾರಿಯನ್ನು ಸಹ ನಡೆಸಿದೆ.
ಈ ಸರಣಿಯ ಮೇಲೆ ಟೀಮ್ ಇಂಡಿಯಾದ ಅಭಿಮಾನಿಗಳ ಚಿತ್ತ ನೆಟ್ಟಿದೆ. ಅನುಭವಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅನುಪಸ್ಥಿತಿ ತಂಡಕ್ಕೆ ಹೇಗೆ ಕಾಡಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಈ ವೇಳೆಯೇ ತಂಡದ ಸಂಯೋಜನೆ ಹೇಗಿರಲಿದೆ ಎಂಬ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಈಗಾಗಲೇ ಭಾರತ "ಎ" ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ 2 ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ.

ಸದ್ಯ ಟೀಮ್ ಇಂಡಿಯಾದಲ್ಲಿರುವ ಅದೆಷ್ಟೋ ಸ್ಲಾಟ್ಗಳ ಮೇಲೆ ಯುವ ಆಟಗಾರರು ಕಣ್ಣು ನೆಟ್ಟಿದ್ದಾರೆ. ಈಗ ಒಂದೇ ಸ್ಥಾನಕ್ಕಾಗಿ ಇಬ್ಬರು ಯುವ ಆಟಗಾರರು ಫೈಟ್ ನಡೆಸುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಅನಧಿಕೃತ ಟೆಸ್ಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಈಗ ಈ ಇಬ್ಬರು ಆಟಗಾರರು ಟೆಸ್ಟ್ ತಂಡದಲ್ಲಿ ಒಂದು ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಟೀಮ್ ಇಂಡಿಯಾದ ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ಶಾರ್ದೂಲ್ ಠಾಕೂರ್ ಒಂದೇ ಸ್ಥಾನಕ್ಕಾಗಿ ಹೋರಾಟ ನಡೆಸಿರುವ ಪ್ರತಿಭೆಗಳು. ಇನ್ನು ಅಭ್ಯಾಸ ಪಂದ್ಯದಲ್ಲಿ ಶಾರ್ದೂಲ್ ಆಡಿದ ಮೊದಲ ಪಂದ್ಯದಲ್ಲಿ ಬ್ಯಾಟ್ನಿಂದ 27 ರನ್ ಬಾರಿಸಿದರೆ, ಬೌಲಿಂಗ್ನಲ್ಲಿ 2 ವಿಕೆಟ್ ಪಡೆದರು. ಎರಡನೇ ಪಂದ್ಯದಲ್ಲಿ ಇವರು 19 ಹಾಗೂ 34 ರನ್ ಸಿಡಿಸಿದರು. ಈ ವೇಳೆ ವಿಕೆಟ್ ಕಾಲಮ್ ಖಾಲಿ ಆಗಿತ್ತು. ಎರಡು ವರ್ಷದ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಶಾರ್ದೂಲ್ ಅವರದ್ದಾಗಿದೆ.

ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮೊದಲ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 7 ರನ್ಗೆ ಔಟ್ ಆದರೆ, ಎರಡನೇ ಇನಿಂಗ್ಸ್ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ 52 ರನ್ ಸಿಡಿಸಿದರು. ಈ ವೇಳೆ ಒಂದು ವಿಕೆಟ್ ಸಹ ಪಡೆದರು. ಎರಡನೇ ಪಂದ್ಯದಲ್ಲಿ ಕ್ರಮವಾಗಿ 34, 42 ರನ್ ಬಾರಿಸಿದ್ರು. ಈ ವೇಳೆಯೂ ಇವರು ಕೇವಲ 1 ವಿಕೆಟ್ ಪಡೆದರು. ಈ ಇಬ್ಬರೂ ಆಟಗಾರರ ಪ್ರದರ್ಶನ ಇಂಗ್ಲೆಂಡ್ನಲ್ಲಿ ಸ್ಥಿರವಾಗಿದ್ದು ಯಾರಿಗೆ ಮಣೆ ಹಾಕಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.