ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಕಾನ್ಪುರ ಟೆಸ್ಟ್ನ ಮೊದಲ ದಿನವಾದ ಶುಕ್ರವಾರ ಸ್ಟೇಡಿಯಂನಲ್ಲಿ ಗೊಂದಲ ಉಂಟಾಗಿದೆ.
ಕಾನ್ಪುರ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿ ಟೈಗರ್ ರಾಬಿ ಅವರನ್ನು ಟೀಮ್ ಇಂಡಿಯಾ ಫ್ಯಾನ್ಸ್ ಥಳಿಸಿರುವ ಆರೋಪ ಕೇಳಿ ಬಂದಿದೆ. ಬಳಿಕ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೂಲಗಳ ಪ್ರಕಾರ, ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಗೇಟ್ ನಂಬರ್ 7ಎ ಬಳಿ ಬಾಂಗ್ಲಾದೇಶ ಅಭಿಮಾನಿಗೆ ಥಳಿಸಲಾಗಿದೆ. ಸ್ಥಳೀಯ ಅಭಿಮಾನಿಗಳು ಮತ್ತು ಟೈಗರ್ ರಾಬಿ ನಡುವೆ ಈ ರೀತಿಯ ಹೊಡೆದಾಟ ನಡೆಯಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಮಾಹಿತಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಅಸ್ವಸ್ಥಗೊಂಡ ಬಾಂಗ್ಲಾ ಅಭಿಮಾನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ವಿಶ್ವ ಹಿಂದೂ ಪರಿಷತ್ನ ಪದಾಧಿಕಾರಿಗಳು ಶುಕ್ರವಾರ ಬೆಳಗ್ಗೆ ಗ್ರೀನ್ ಪಾರ್ಕ್ ಸ್ಟೇಡಿಯಂನ ಹೊರಗೆ ಪ್ರತಿಭಟನೆ ನಡೆಸಿದ್ದರು. ಯಾವುದೇ ದೊಡ್ಡ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಸ್ಟೇಡಿಯಂ ಸುತ್ತಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಾರತ ಮತ್ತು ಬಾಂಗ್ಲಾದೇಶ ಎರಡನೇ ಟೆಸ್ಟ್ ಇನ್ನೂ ನಾಲ್ಕು ದಿನಗಳ ಕಾಲ ಇದೇ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೆಚ್ಚಿನ ಸೂಕ್ತ ಭದ್ರತೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ನಿರಂತರ ದೌರ್ಜನ್ಯ ಮತ್ತು ದೇವಾಲಯಗಳ ಮೇಲಿನ ದಾಳಿಯಿಂದ ಅನೇಕ ಹಿಂದೂ ಸಂಘಟನೆಗಳು ಸಿಟ್ಟಿಗೆದ್ದಿವೆ . ಕೆಲವು ಹಿಂದೂ ಸಂಘಟನೆಗಳು ಬಾಂಗ್ಲಾದೇಶದೊಂದಿಗಿನ ಈ ಟೆಸ್ಟ್ ಸರಣಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದವು. ಆದರೂ ಉಭಯ ದೇಶ ತಂಡಗಳ ನಡುವೆ ಟೆಸ್ಟ್ ಸರಣಿಯ ಕೊನೆ ಪಂದ್ಯ ನಡೆಯುತ್ತಿದೆ.
ಮತ್ತೊಂದೆಡೆ ಆಕ್ಟೋಂಬರ್ 6 ರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಟಿ20 ಸರಣಿಯ ಆರಂಭವಾಗಲಿದೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಹಿಂದೂ ಮಹಾಸಭಾ ಬಂದ್ ತಟ್ಟಲಿದೆ. ನೆರೆ ರಾಷ್ಟ್ರದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಭಾರತ ಮತ್ತು ಬಾಂಗ್ಲಾದೇಶವನ್ನು ನಿಷೇಧಿಸುವಂತೆ ಒತ್ತಾಯಿಸಿ ಬಂದ್ ನಡೆಸುವುದಾಗಿ ಹಿಂದೂ ಮಹಾಸಭಾ ತಿಳಿಸಿದೆ.