ಆರ್ಆರ್ ತೊರೆದು ಈ ತಂಡಕ್ಕೆ ಹೋಗ್ಬಿಡು: ಯಶಸ್ವಿ ಜೈಸ್ವಾಲ್ಗೆ ರಾಯುಡು ಸಲಹೆ
Ambati Rayudu: ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಕ್ವಾಲಿಫೈಯರ್ 2 ಹಂತಕ್ಕೆ ತಲುಪಿದೆ. ಇನ್ನೂ ಎಸ್ಆರ್ಎಚ್ ಈ ಸೋಲಿನೊಂದಿಗೆ ಈ ಬಾರಿಯ ಟೂರ್ನಿಯಿಂದಲೇ ಹೊರನಡೆದಿದೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಅವರು ವೈಭವ್ ಸೂರ್ಯವಂಶಿ ಅವರಿಂದ ಯಶಸ್ವಿ ಜೈಸ್ವಾಲ್ ಮಂಕಾಗಿದೆ. ಅವರು ಟೀಮ್ ಬದಲಾವಣೆ ಮಾಡುವುದು ಸೂಕ್ತ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಅಂಬಟಿ ರಾಯುಡು ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಹೆಚ್ಚಾಗಿ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವ ಉದಾಹರಣೆಗಳಿವೆ. ಇದೀಗ ಯಶಸ್ವಿ ಜೈಸ್ವಾಲ್ ಅವರು ರಾಜಸ್ಥಾನ್ ರಾಯಲ್ಸ್ ತೊರೆಯುವುದು ಒಳ್ಳೆಯದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವೈಭವ್ನಿಂದ ಮಂಕಾದ್ರಾ ಜೈಸ್ವಾಲ್?
ಐಪಿಎಲ್ನಲ್ಲಿ ಆರ್ಆರ್ ಪರ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಲೋಕವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಮೂಲಕ ವೈಭವ್ ತಮ್ಮ ಆರಂಭಿಕ ಜೊತೆಗಾರ ಜೈಸ್ವಾಲ್ ಅವರನ್ನೂ ಕೂಡ ಹಿಂದಿಕ್ಕಿದ್ದಾರೆ. ಜೈಸ್ವಾಲ್ 15 ಪಂದ್ಯಗಳಿಂದ 426 ರನ್ ಗಳಿಸಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ಜೂನಿಯರ್ ಯೂನಿರ್ಸಲ್ ಬಾಸ್ ಅವರ ಸಾಧನೆಗೆ ಹೋಲಿಸಿದರೆ ಅದು ಮಂಕಾಗಿ ಕಾಣುತ್ತದೆ.
ಬೇರೆ ತಂಡಕ್ಕೆ ಹೋಗುವಂತೆ ಸಲಹೆ
ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ವೈಭವ್ ಈಗಾಗಲೇ 680 ರನ್ಗಳನ್ನು ಬಾರಿಸಿದ್ದು, ಅವರ ರನ್ ಕೂಡ 334.48 ಆಗಿದೆ. ಅವರ ಜನಪ್ರಿಯತೆಯು ದಿಗ್ಗಜ ವಿರಾಟ್ ಕೊಹ್ಲಿ ಅವರನ್ನು ಕೂಡ ಮೀರಿಸುವಂತಿದೆ. ಈ ರನ್ ಹಾಗೂ ರನ್ ರೇಟ್ ಸ್ಪರ್ಧೆಯಲ್ಲೂ ಕೂಡ ಈ 15 ವರ್ಷದ ಬಾಲಕನೇ ಮೇಲುಗೈ ಸಾಧಿಸಿದ್ದಾರೆ. ಇದೇ ಕಾರಣದಿಂಲೇ ಅಂಬಟಿ ರಾಯುಡು ಅವರು ಜೈಸ್ವಾಲ್ ಬೇರೆ ತಂಡಕ್ಕೆ ಹೋಗುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ಯಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
2020ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿಕೊಂಡು ಬಂದಿರುವ ಜೈಸ್ವಾಲ್ ಸೂರ್ಯವಂಶಿ ಅವರ ನೆರಳಿನಿಂದ ಹೊರಬರಬೇಕು. ಮತ್ತೊಂದು ಬೇರೆ ತಂಡದಲ್ಲಿ ತಮಗಾಗಿ ಪ್ರತ್ಯೇಕ ಸ್ಥಾನವನ್ನು ಕಂಡುಕೊಳ್ಳಲು ಆರ್ಆರ್ ತಂಡವನ್ನು ಬಿಡಬೇಕು ಎಂದು ಅಂಬಟಿ ರಾಯುಡು ಅವರು ಸಲಹೆ ನೀಡಿದ್ದಾರೆ.
ಈ ಐಪಿಎಲ್ ಸೀಸನ್ನಲ್ಲಿ ಜೈಸ್ವಾಲ್ ಮತ್ತು ಸೂರ್ಯವಂಶಿ ನಡುವಿನ ಹೋಲಿಕೆಗಳ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಸ್ಟಾರ್ ಓಪನರ್ ಜೈಸ್ವಾಲ್ ಅವರು ಸೂರ್ಯವಂಶಿಯ ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ ಮಾನಸಿಕವಾಗಿ ಸ್ವಲ್ಪ ವಿಚಲಿತರಾದಂತೆ ಕಾಣುತ್ತಿದ್ದಾರೆ. ಅದರ ಪರಿಣಾಮವಾಗಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರವಿಚಂದ್ರನ್ ಅಶ್ವಿನ್ ಕೂಡ ಈ ಹಿಂದೆ ಹೇಳಿದ್ದರು. ಇದೀಗ ಇದೇ ವಿಷಯ ಪ್ರಸ್ತಾಪಿಸಿದ ರಾಯುಡು ಜೈಸ್ವಾಲ್ ಮತ್ತೊಂದು ಫ್ರಾಂಚೈಸಿಯ ಪರ ಆಡುವ ಅವಕಾಶವನ್ನು ಪಡೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಅಂಬಟ್ಟಿ ರಾಯುಡು ಹೇಳಿದ್ದೇನು?
"ಜೈಸ್ವಾಲ್ ಅವರು ಈಗಿರುವ ಆರ್ಆರ್ ತಂಡವನ್ನು ಬದಲಾಯಿಸಬೇಕು. ಏಕೆಂದರೆ ಅವರು ಸೂರ್ಯವಂಶಿ ಜೊತೆ ಬ್ಯಾಟ್ ಮಾಡುತ್ತಾ ಪ್ರತಿ ಬಾರಿಯೂ ಅವರ ನೆರಳಲ್ಲೇ ಮಂಕಾಗುತ್ತಿದ್ದಾರೆ ಅನಿಸುತ್ತಿದೆ. ಜೈಸ್ವಾಲ್ ಒಬ್ಬ ಸ್ಟಾರ್ ಆಟಗಾರ. ಅವರು ಬೇರೆ ತಂಡಕ್ಕೆ ಹೋದರೆ ತಮ್ಮ ಸ್ವಂತ ಬಲದ ಮೇಲೆ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾರೆ. ಅವರಿಗೆ ತಮ್ಮದೇ ಆದ ಪ್ರತ್ಯೇಕ ಅವಕಾಶ ಮತ್ತು ವೇದಿಕೆಯ ಅಗತ್ಯವಿದೆ. ಹಿರಿಯ ಆಟಗಾರನು ನಾನ್-ಸ್ಟ್ರೈಕರ್ ಜೊತೆ ಸ್ಪರ್ಧೆಗೆ ಇಳಿಯದೆ, ಅಲ್ಲಿ ನಡೆಯುತ್ತಿರುವುದನ್ನು ಕಂಡು ಖುಷಿಪಡುವಂತಿರಬೇಕು,' ಎಂದು ರಾಯುಡು ಇಎಸ್ಪಿಎನ್ಕ್ರಿಕ್ಇನ್ಫೋದಲ್ಲಿ ಹೇಳಿದ್ದಾರೆ.
ಮುಂಬೈ ತಂಡದ ಪರ ಆಡುವಂತೆ ಸಲಹೆ
ಉಳಿದ 9 ಫ್ರಾಂಚೈಸಿಗಳಲ್ಲಿ ಜೈಸ್ವಾಲ್ ಅವರು ಮುಂಬೈ ಇಂಡಿಯನ್ಸ್ ತೆರಳುವುದೇ ಸೂಕ್ತ ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಜೈಸ್ವಾಲ್ ತಮ್ಮೆಲ್ಲಾ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಮುಂಬೈ ಪರವಾಗಿಯೇ ಆಡಿದ್ದಾರೆ. ಆದ್ದರಿಂದ ಅವರ ಮುಂದಿನ ಆಯ್ಕೆ ಮುಂಬೈ ಇಂಡಿಯನ್ಸ್ ಆಗಿರಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲೊ ಹೇಳುವುದಾದರೆ, ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟದಿಂದ ಯಶಸ್ವಿ ಜೈಸ್ವಾಲ್ ಆಟಕ್ಕೆ ತೊಂದರೆ ಆಗುತ್ತಿದೆ. ಆದ್ದರಿಂದ ಜೈಸ್ವಾಲ್ ಆರ್ಆರ್ ತೊರೆದು ಮುಂಬೈಗೆ ಬಂದರೆ ಸೂಕ್ತ ಎಂದು ರಾಯುಡು ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications